Saturday, January 17, 2009

ಮುಂಗಾರು ಮಳೆ ಬಂದ ಮೇಲೆ ಕ್ವಾಲಿಟಿ ಬಂತಾ???

ಮಧ್ಯಾನ್ಹದ ಊಟ ಮುಗಿಸಿ ಸಹುದ್ಯೋಗಿಗಳೊಂದಿಗೆ ಸೇರಿ ಒಂದು ರೌಂಡ್ಸ್ ಹೋಗೋ ಅಭ್ಯಾಸ ಇದೆ.ನಿನ್ನೆ ಹಾಗೆ ಹೋಗುವಾಗ, ಗೆಳೆಯ ಕಾರ್ತಿಕ್ ಹೇಳಿದ್ರು 'ಬೆಳಿಗ್ಗೆ ಎದ್ದ ತಕ್ಷಣ ನಾನು ರೇಡಿಯೋ ಕೇಳೋ ಅಭ್ಯಾಸ ಮಾಡ್ಕೊಂಡಿದ್ದೀನಿ'. ಓಹೋ,ಇದೇನೋ ಹೊಸ ಅಭ್ಯಾಸ ಅಂತ ಸವಿತ ಕೇಳಿದ್ರು.

ಅದಕ್ಕೆ, ನಾನು ಈಗ ಕೆಲವು FM ಗಳಲ್ಲಿ ಕನ್ನಡ ಹಾಡು ಮಾತ್ರ ಹಾಕ್ತಾ ಇದ್ದಾರೆ ಅಲ್ವಾ ಅಂದೆ, ಅದಕ್ಕೆ ಕಾರ್ತಿಕ್ ಹೌದು ಹೌದು , ಇತ್ತೀಚಿಗೆ ಕನ್ನಡದ ಹಾಡುಗಳು ಚೆನ್ನಾಗಿ ಬರುತ್ತಿವೆ ಅಂದ್ರು!

ನಾನು ಸವಿತ ಇಬ್ಬರು ಒಟ್ಟಿಗೆ "ಅಂದ್ರೆ ಏನಪ್ಪಾ ಮೊದಲೆಲ್ಲ ಚೆನ್ನಗಿರಲಿಲ್ವಾ?" ಅಂದ್ವು.
ಅವರು " ಇಲ್ಲ ಇಲ್ಲ 'ಮುಂಗಾರು ಮಳೆ' ಬಂದ ಮೇಲೆ ಕನ್ನಡದಲ್ಲಿ ಹಾಡುಗಳು ಚೆನ್ನಾಗಿ ಬರ್ತಾ ಇದೆ" ಅನ್ನೋದಾ?

ಅಲ್ಲ ಗುರುವೇ, ನಿನಗೆ ಹಳೆ ಕನ್ನಡ ಚಿತ್ರ ಗೀತೆಗಳ ಬಗ್ಗೆ ಗೊತ್ತಾ? ಕೇಳಿದ್ದಿಯಾ? ಅಂದ್ರೆ,ಪುಣ್ಯಾತ್ಮ ಕಾರ್ತಿಕ್ ಅವರದೇ ಧಾಟಿಯಲ್ಲಿ ಹೇಳುತ್ತಾ ಹೋದರು,
'ಸೋನು ,ಶ್ರೇಯ,ಸುನಿಧಿ,ಗಾಂಜಾವಾಲ' ಎಲ್ಲ ಈಗ ಕನ್ನಡದಲ್ಲಿ ಹಾಡ್ತಾ ಇರೋದ್ರಿಂದ ಕ್ವಾಲಿಟಿ ಚೆನ್ನಾಗಿದೆ.

ಸವಿತ ಏನೇ ಹೇಳಿದರು, ಕಾರ್ತಿಕ್ಗೆ ಅವರು ಹೇಳಿದ್ದೆ ಸರಿ ಅನ್ನುವಂತೆ ಅಸಂಬದ್ಧವಾಗಿ ವಾದ ಮಾಡುತ್ತಲೇ ಹೋದರು. ಅಂದ ಹಾಗೆ ಈ ಕಾರ್ತಿಕ್ ಕನ್ನಡದವರಲ್ಲ, ತೆಲುಗಿನವರು. ಆದ್ರೆ ಕನ್ನಡ ಮಾತನಾಡುತ್ತಾರೆ,ಕನ್ನಡ ಸಿನಿಮಾ ನೋಡ್ತಾರೆ.

ಅವರು ಹೇಳಿದ ಮಾತಿನಿಂದ ನನಗೆ ಎರಡು ವಿಷಯಗಳು ತಲೆಯಲ್ಲಿ ಹರಿಯಲಾರಂಭಿಸಿತು.
೧. ಯಾವುದೇ ವಿಷಯದ ಅರಿವು ಇಲ್ಲದೆ, ಟೀಕೆ- ಟಿಪ್ಪಣಿ ಮಾಡುತ್ತಾ, ಸ್ವಲ್ಪ ಜ್ಞಾನವು ಇಲ್ಲದೆ ತೀರ್ಪನ್ನು ಕೊಟ್ಟು ಬಿಡುವ ಅವಿವೇಕಿಗಳ ಬಗ್ಗೆ.
೨. ಇತ್ತೀಚಿಗೆ ಕನ್ನಡ ಚಿತ್ರಗಳಲ್ಲಿ ಅತಿಯಾಗಿ ಬಾಲಿವುಡ್ನ ಗಾಯಕ ಗಾಯಕಿಯರಿಗೆ ಮಣೆ ಹಾಕಲಾಗುತ್ತಿದೆಯೇ ಎಂಬ ಬಗ್ಗೆ ?

ಆದರೆ, ಇವೆರಡರಲ್ಲಿ ಮೊದಲನೆ ವಿಷಯ ಸ್ವಲ್ಪ ವಿಚಾರ ಮಾಡಬೇಕಾದದ್ದು, ಅದೇನಿದ್ದರೂ ವಿಚಾರವಾದಿಗಳಿಗೆ, ಬುದ್ದಿಜೀವಿ(?)ಗಳಿಗೆ ಇರಲಿ ಅಂತ ಬಿಟ್ಟು,ಎರಡನೇ ವಿಷಯದ ಬಗ್ಗೆ ಬರೆಯುತಿದ್ದೇನೆ.

ಹೌದು, ಇಲ್ಲ ಅಂದ್ರು ಇತ್ತೀಚಿಗೆ ಕನ್ನಡ ಚಿತ್ರಗಳಲ್ಲಿ ಅತಿ ಎನಿಸುವಷ್ಟು ಬಾಲಿವುಡ್ ಗಾಯಕ ಗಾಯಕಿಯರಿಗೆ ಮಣೆ ಹಾಕಲಾಗುತ್ತಿದೆ. ಖಂಡಿತ ಅವರ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಶ್ರೇಯ ಹಾಡುವ ಶೈಲಿ ಇದೆಯಲ್ಲ, ಅವಳು ಒಂದೊಂದೇ ಶಬ್ದವನ್ನು ಅಪ್ಪಟ ಕನ್ನಡತಿಯಂತೆ ಉಚ್ಚಾರಿಸುತ್ತಾಳೆ, ಸೋನು ಹಾಡಿನಲ್ಲೇ ಕಿಕ್ ಬರಿಸುತ್ತಾನೆ ಅವರೆಲ್ಲ ಪ್ರತಿಭಾವಂತರೆ ಆ ಬಗ್ಗೆ ಎರಡು ಮಾತಿಲ್ಲ.

ಕನ್ನಡ ಚಿತ್ರ ರಂಗದಲ್ಲಿ ಇದು ಹೆಚ್ಚಾಗಿ ಆಗುತ್ತಿದೆ, ಹೀಗೆ ಸ್ವಲ್ಪ ದಿನದ ಹಿಂದೆ ಕನ್ನಡ ಗಾಯಕ ಗಾಯಕಿಯರು , ನಿರ್ಮಾಪಕರ ಈ ನೀತಿಯನ್ನು ವೀರೋಧಿಸಿದ್ದರು, ಆಗ ಒಬ್ಬ ಸಂಗೀತ ನಿರ್ದೇಶಕರು 'ಇಲ್ಲಪ್ಪ, ಆಗಕ್ಕಿಲ್ಲ ಆ ಸೋನು , ಶ್ರೇಯ ಇಲ್ಲ ಅಂದ್ರೆ ನಂಗೆ ಮ್ಯೂಸಿಕ್ ಮಾಡಕ್ಕೆ ಆಗಕಿಲ್ಲ" ಅಂದ್ರು ಅಂತ ಪೇಪರ್ನಲ್ಲಿ ಓದಿದ ನೆನಪು. ಪಾಪ Sad ಅವರಿಗೆ ಆ ಗಾಯಕರ ಮೇಲೆ ಇರುವಷ್ಟು ನಂಬಿಕೆ ಅವರ ಸಂಗೀತದ ಮೇಲೆ ಇಲ್ಲ ಅನ್ನಿಸುತ್ತೆ!

ಈ ಮಾತು ಹೇಳುವಾಗ ಎಲ್ಲರೂ ಒಂದು ಮಾತು ಹೇಳುತ್ತಾರೆ "ಸಂಗೀತಕ್ಕೆ ಯಾವುದೇ ಭಾಷೆಯಿಲ್ಲ, ಕಲಾವಿದರಿಗೆ ಭಾಷೆಯ ಪರಿಧಿಯಿಲ್ಲ" ಅಂತ, ನಿಜ ನಿಜ ಒಪ್ಪುವಂತದ್ದೆ.

ನಮ್ಮ ನಿರ್ಮಾಪಕರ ತಲೆಯಲ್ಲಿ ಅದ್ಯಾವ ದೈವ ವಾಣಿ ಆಗಿದೆಯೋ ತಿಳಿಯದು, ಬಹಳಷ್ಟು ನಿರ್ಮಾಪಕರಿಗೆ ಸಂದರ್ಶನದಲ್ಲಿ "ಕನ್ನಡ ಗಾಯಕರನ್ನು ಏಕೆ ಬಳಸಿಲ್ಲ?" ಅಂತ ಕೇಳಿದರೆ, "ಬಾಲಿವುಡ್ ಗಾಯಕ/ಗಾಯಕಿಯರ ಹೆಸರಿದ್ದರೆ ಜನ ಹಾಡು ಜಾಸ್ತಿ ಕೇಳ್ತಾರೆ" ಅಂತಾರೆ.
ಅಂದ್ರೆ ಏನರ್ಥ ಸ್ವಾಮಿ ಸಂಗೀತ, ಸಾಹಿತ್ಯ ಹೇಗಿದ್ರು ಪರವಾಗಿಲ್ಲ, ಅವರು ಹಾಡಿಬಿಟ್ಟರೆ ಅದು ಚೆನ್ನಾಗಿ ಆಗುತ್ತೆ ಅಂತಾನಾ? ಅಬ್ಬಾ!

'ಉಪ್ಪಿನಕಾಯಿಯನ್ನು ಊಟದ ಜೊತೆಗೆ ತಿಂದರೆ ಚಂದ, ಆದರೆ ಚೆನ್ನಾಗಿದೆ ಅಂತ, ಉಪ್ಪಿನಕಾಯಿಯನ್ನೇ ಊಟ ಎಂದು ತಿನ್ನಲಾಗುತ್ತದೆಯೇ?'

ನನಗೆ ಅನ್ನಿಸೋದು ಅವರನ್ನು ಬಳಸಿಕೊಳ್ಳೋದು ತಪ್ಪಲ್ಲ, ಆದರೆ ನಮ್ಮಲ್ಲೇ ಪ್ರತಿಭೆಗಳಿರುವಾಗ ಅವರನ್ನು ಸ್ವಲ್ಪ ಕಡಿಮೆಯಾಗಿ, ಬೇಕು ಎನಿಸುವಂತ ಹಾಡುಗಳಿಗೆ ಮಾತ್ರ ಕರೆಸಬಹುದಲ್ವಾ?

ನಿಮಗೆ ಈ ರೀತಿ ಅನ್ನಿಸುವುದಿಲ್ಲವೇ?

-- ರಾಕೇಶ್ ಶೆಟ್ಟಿ Smiling

ಭಾರತಾಂಬೆಯ ವೀರ ಪುತ್ರರಿವರು, ಮುಂಬೈ ಮಾರಣಹೋಮದ ಹುತಾತ್ಮರಿವರು

ಮುಂಬೈ ಮಾರಣ ಹೋಮದಲ್ಲಿ , ನಮ್ಮ ನಾಳೆಗಳಿಗಾಗಿ, ತಾಯ್ನೆಲದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರ ಹೆಸರಿದು. ಮಿಂಚಂಚೆಯಲ್ಲಿ ಬಂದಿದ್ದು. ನನಗೆ ಸಿಕ್ಕ ಮಾಚಿತಿಯಿಷ್ಟು, ಇನ್ನು ಯಾವುದಾದರು ಹೆಸರಿದ್ದರೆ ದಯವಿಟ್ಟು ಇಲ್ಲಿ ಸೇರಿಸಿ

ಭಾರತಾಂಬೆಯ ಈ ವೀರ ಪುತ್ರರು ಅಮರರಾಗಲಿ .

ಕಾನ್ಸ್ ಟೇಬಲ್ - ಜಯವಂತ್ ಪಾಟೀಲ್
ಕಾನ್ಸ್ ಟೇಬಲ್ - ಯೋಗೇಶ್ ಪಾಟೀಲ್
ಕಾನ್ಸ್ ಟೇಬಲ್ - ಅಮ್ಬದಾಸ್ ಪವಾರ್
ಕಾನ್ಸ್ ಟೇಬಲ್ - ಎ .ಆರ್ ಚಿಟ್ಟೆ
ಕಾನ್ಸ್ ಟೇಬಲ್ - ವಿಜಯ್ ಖಂಡೇಕರ್
ರೈಲ್ವೆ ಪೋಲಿಸ್ - ಎಂ.ಸಿ .ಚೌದರಿ
N.S.G ಕಮಾಂಡೋ - ಗಜೆಂದರ್ ಸಿಂಗ್
ಇನ್ಸ್ಪೆಕ್ಟರ್ - ಶಶಾಂಕ್ ಶಿಂದೆ
Asst. ಸಬ್ ಇನ್ಸ್ಪೆಕ್ಟರ್ - ವಿ.ಒಬಲೇ
ಸಬ್ ಇನ್ಸ್ಪೆಕ್ಟರ್ - ಪ್ರಕಾಶ್ ಮೊರೆ
ಸಬ್ ಇನ್ಸ್ಪೆಕ್ಟರ್ - ಬಾಬುಸಾಹೇಬ್ ದುರ್ಗುಡೆ
ಸಬ್ ಇನ್ಸ್ಪೆಕ್ಟರ್ - ನಾನಸಹೇಬ್ ಭೋಸ್ಲೆ
ಸಬ್ ಇನ್ಸ್ಪೆಕ್ಟರ್ - ತುಕಾರಾಂ ಓಂಭ್ಲೆ
ಮೇಜರ್ - ಸಂದೀಪ್ ಉನ್ನಿ ಕೃಷ್ಣನ್
ಹೆಚ್ಚುವರಿ ಪೋಲಿಸ್ ಕಮೀಷನರ್ - ಅಶೋಕ್ ಕಾಮ್ಟೆ
ಸೀನಿಯರ್ ಪೋಲಿಸ್ ಇನ್ಸ್ಪೆಕ್ಟರ್ - ವಿಜಯ್ ಸಾಲಸ್ಕರ್
ATS ಮುಖ್ಯಸ್ತ - ಹೇಮಂತ್ ಕರ್ಕರೆ

ಜೈ ಹಿಂದ್

ಅವರು ಸಾವನ್ನೇ ಕೂಗಿ ಕರೆದರು!!

ಯಾರು ತಮ್ಮ ಸಾವನ್ನು ತಾವೇ ಹುಡುಕಿ ಹೋಗುತ್ತಾರೆ? ಆದರೆ ಕಳೆದವಾರ ಮುಂಬೈ ಮಾರಣ ಹೋಮದಲ್ಲಿ ಸಾವನ್ನು ಹುಡುಕಿಕೊಂಡು ಹೋದ ವೀರ ಪೋಲಿಸ್ ಅಧಿಕಾರಿಯ ಕತೆಯಿದು.

ಮುಂಬೈ ಮೂಲದ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದಿದ್ದ ಮಾಹಿತಿಯಿದು, ಆ ವೀರನ ಬಗ್ಗೆ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಇಲ್ಲಿ ಬರೆಯುತಿದ್ದೇನೆ.

ಸುತ್ತಲೂ ಕಗ್ಗತ್ತಲು, ಬೀದಿ ಬದಿಯ ದೀಪವೂ ಅಲ್ಲಿರಲಿಲ್ಲ. ಅದೇ ಜಾಗದಲ್ಲಿ ಕೈಯಲ್ಲಿ ರೈಫಲ್ ಹಿಡಿದು ಪಹರೆ ಕಾಯುತಿದ್ದವರು ಮುಂಬೈನ ಪೋಲಿಸ್ ಸಬ್-ಇನ್ಸ್ಪೆಕ್ಟರ್ ಬಾಪುರಾವ್ ದುರ್ಗುಡೆ. ಅವರಿಗೆ ಕಳೆದ ಬುಧವಾರ ಉಗ್ರರ ದಾಳಿಗೆ ತುತ್ತಾಗಿದ್ದ 'ಕಾಮ ಆಸ್ಪತ್ರೆ'ಯ ಬಳಿಯಿರುವ 'St Xavier’s' ಕಾಲೇಜ್ನ ಬಳಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ಕಾಮ ಆಸ್ಪತ್ರೆಯ ಕಡೆ ಸಾರ್ವಜನಿಕರು ಬರದಂತೆ ತಡೆಯಲು ಆದೇಶ ಬಂದಿತ್ತು.

ಅವರು ನೋಡುತಿದ್ದಂತೆ ಇಬ್ಬರು ಕಾಲೇಜ್ ವಿದ್ಯಾರ್ಥಿಗಳಂತೆ ಕಾಣುವ ಯುವಕರು ಕಾಮ ಆಸ್ಪತ್ರೆ ಬಳಿ ಹೊರಟಿದ್ದರು, ದುರ್ಗುಡೆ ಯುವಕರನ್ನು ಎಚ್ಚರಿಸಲು "ಕಾಮ ಆಸ್ಪತ್ರೆ ಬಳಿ ಉಗ್ರರ ದಾಳಿಯಾಗಿದೆ, ಗುಂಡಿನ ದಾಳಿ ನಡೆಯುತ್ತಿದೆ, ಅತ್ತ ಹೋಗಬೇಡಿ" ಎಂದು ಕೂಗಿ ಹೇಳಿದರು. ಆದರೆ ಆ ಯುವಕರು ಒಮ್ಮೆ ದುರ್ಗುಡೆಯವರನ್ನು ನೋಡಿ ಮುಂದಡಿಯಿಟ್ಟರು.

ಬಹುಷಃ ಯುವಕರಿಗೆ ಹೇಳಿದ್ದು ಸರಿಯಾಗಿ ಕೇಳಿಲ್ಲ ಎಂದು ತಿಳಿದು, ಅವರತ್ತ ಹೆಜ್ಜೆಯಿಡಲು ಶುರು ಮಾಡಿದರು.

ಅವರ ಸನಿಹ ತೆರಳಿ ಅಡ್ಡಗಟ್ಟುವಷ್ಟರಲ್ಲಿ ಯುವಕನ ಕೈಯಲ್ಲಿದ್ದ AK47 ಬಾಯ್ತೆರೆದಿತ್ತು. ನಾನು ತಡೆದಿರುವುದು ಉಗ್ರರನ್ನು ಎಂದು ದುರ್ಗುಡೆಯವರಿಗೆ ತಿಳಿದು ರೈಫಲ್ ತೆಗೆಯುವಷ್ಟರಲ್ಲಿ ತೋರಿ ಬಂದ ಬುಲೆಟ್ ಅವರ ಎದೆಗೆ ನಾಟಿತ್ತು.

ಪ್ರಾಣ ಉಳಿಸಲು ಹೋದವನ ಪ್ರಾಣವನ್ನೇ ತೆಗೆದರು ಉಗ್ರರು.
ಆ ವೀರ ಯೋಧನಿಗೊಂದು ನುಡಿ ನಮನ.

ಪನ್ನೀರೋ.. ಕಣ್ಣೀರೋ..

ಸಪ್ತಪದಿ ತುಳಿಯಲು ಹೊರಟ
ಗೆಳತಿಯ ನೋಡಲು ಹೋಗಿದ್ದೆ
ನಾ ಸಪ್ತರ್ಷಿ ಕಲ್ಯಾಣ ಮಂದಿರಕ್ಕೆ

ಸಪ್ತ ಸ್ವರಗಳ ಹಿಮ್ಮೇಳ ಮೊಳಗುತಿದ್ದ
ಕಲ್ಯಾಣ ಮಂದಿರದೊಳಗೆ ಕಾಲಿಡುತಿದ್ದಂತೆ
'ಪನ್ನೀರ ಸ್ವಾಗತ' ಕೋರಲು ನಿಂತಿದ್ದ
ಅವಳ ನೋಡಿದೆ, ಆಹಾ! ಜಗತ್ ಸುಂದರಿಯವಳು

ನಾ ಕೊಟ್ಟ ನಗೆ ಮಲ್ಲಿಗೆಯ ಮುಡಿದವಳಿಗೆ
ಬೆಳ್ಳಿ ಕಾಲುಂಗುರವ ತೊಡಿಸಿ,ನನ್ನ
ಹೃದಯದ ಮನೆಗೆ ಸ್ವಾಗತಿಸಲೇ
ಪ್ರೀತಿಯ ಅರಮನೆಗೆ ಮಹಾರಾಣಿ ಮಾಡಲೇ
ಎಂದು ಮನದಲ್ಲಿ ಅಂದು ಕೊಂಡಾಗಲೇ

ಅವಳ ಪಕ್ಕ ನಿಂತಿದ್ದ ಮುದ್ದಾದ ಮಗು
ಹೇಳಿತು ಮುತ್ತಿನಂತ ಮಾತೊಂದು
"ಅಮ್ಮಾ, ಅಮ್ಮಾ ಅಂಕಲ್ಗೆ ನಾನು
ಪನ್ನೀರು ಹಾಕ್ತೀನಿ ಕೊಡಮ್ಮಾ!!! "

-- ರಾಕೇಶ್ ಶೆಟ್ಟಿ Laughing out loud

ಚಾ ಚಾ ನೆಹರೂ,ಚೀನಿ ಭಾಯಿ ಹಾಗೂ ಚರಮ ಗೀತೆ!!!

"ಮನುಷ್ಯ ಸುಖವಾಗಿರುವಾಗ ದೇವರು , ಡಾಕ್ಟರ್ ಹಾಗು ಯೋಧರನ್ನು ಮರೆತುಬಿದುತ್ತಾನೆ" ಅಂತ ಮೊನ್ನೆ ರೇಡಿಯೋದಲ್ಲಿ ರವಿ ಬೆಳಗೆರೆ ಹೇಳುತ್ತಿದ್ದರು. ಅವರಿಗೆ ಈ ಮಾತನ್ನು ಹೇಳಿದ್ದು ಕಾರ್ಗಿಲ್ ಸಮರದಲ್ಲಿ ವೀರ ಮರಣವನ್ನಪ್ಪಿದ 'ಪುರುಷೋತ್ತಮ್' ಎಂಬವರು.
ಈ ದಿನ ಅಂತ ವೀರ ಯೋಧರ ನೆನಪಿಗಾಗಿ ಈ ಲೇಖನ. ಅಂದ ಹಾಗೆ ವೀರ ಯೋಧರ ನೆನಪಾಗಲು ಕಾರಣವೇನು ಗೊತ್ತೇ, 'ಮಕ್ಕಳ ದಿನಾಚರಣೆ'.

ಮಕ್ಕಳ ದಿನಾಚರಣೆ ಎಂದರೆ ತಟ್ಟನೆ ನೆನಪಿಗೆ ಬರುವವರು ಚಾ ಚಾ ನೆಹರು. ಅವರ ಹುಟ್ಟು ಹಬ್ಬವನ್ನು ತಾನೆ ನಾವು ಮಕ್ಕಳ ದಿನಾಚರಣೆ ಎಂದು ಆಚರಿಸುವುದು. ಮಕ್ಕಳಿಗೆ ಚಾ ಚಾ ನ ಬಗ್ಗೆ ಕೇಳಿ, "ಅವರು ಭಾರತದ ಮೊದಲ ಪ್ರಧಾನ ಮಂತ್ರಿ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಅವರಿಗೆ ಮಕ್ಕಳು ಹಾಗು ಕೆಂಪು ಗುಲಾಬಿ ಎಂದರೆ ಬಹಳ ಇಷ್ಟ " ಈ ರೀತಿ ಉತ್ತರ ಬರುತ್ತದೆ.
ಆದರೆ ಇಂದು ರೇಡಿಯೋದಲ್ಲಿ ಈ ಮಕ್ಕಳ ದಿನಾಚರಣೆ ಅಂಗವಾಗಿ ಮಾತನಾಡುವಾಗ ನನಗೆ ನೆನಪಾಗಿದ್ದು , ಇಂದಿಗೆ ೪೬ ವರ್ಷಗಳ ಹಿಂದೆ ನಡೆದ ಒಂದು ಘಟನೆ, ಅದು ಭಾರತೀಯರಿಗೆ ಹಾಗು ಭಾರತಕ್ಕೆ ಮರೆಯಲಾಗದಂತಹ ಕರಾಳ ನೆನಪು ತರುವಂತದ್ದು. ಹೌದು ನಾನು ಹೇಳುತ್ತಿರುವುದು ೧೯೬೨ರಲ್ಲಿ ನಡೆದ ಭಾರತ ಚೀನಾ ಯುದ್ಧದ ಬಗ್ಗೆ. ಅದರ ಬಗ್ಗೆಯೇ ಇಲ್ಲಿ ಬರೆದಿದ್ದೇನೆ.
ಈ ಲೇಖನಕ್ಕೆ ಮೂಲ ಆಧಾರ "ಹಿಮಾಲಯನ್ ಬ್ಲಂಡರ್" ಎಂಬ ಹೊತ್ತಿಗೆ "ಬ್ರಿಗೇಡಿಯರ್ ಜಾನ್.ಪಿ ದಳವಿ" ಅವರು ಬರೆದಿದ್ದು , ಅದನ್ನು ರವಿ ಬೆಳಗೆರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆ ಘಟನೆಗಳನ್ನು ನನಗೆ ಅನ್ನಿಸಿದ ರೀತಿಯಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಓದಿ ಕೊಳ್ಳಿ.

ತಣ್ಣಗೆ ಕೊರೆಯುತ್ತಿರುವ ಚಳಿ, ಕಣ್ಣರಳಿಸಿದಷ್ಟು ದೂರ ಕಾಣುವ ಬೆಳ್ಳ ಬಿಳುಪಿನ ಮಂಜು, ಧರಿಸಿರುವ ತೆಳ್ಳನೆ ಕಾಟನ್ ಶಿರ್ಟನ್ನು ಸೀಳಿ ಹೊಳ ನುಗ್ಗುತ್ತಿರುವ ಹಿಮಗಾಳಿಗೆ ಜೀವ ಹಿಂಡಿದಂತಾಗುತ್ತಿದೆ , 'ಶೂ' ಗಳು ಹಳೆಯದಾಗಿ ತಳ ಸವೆದಿದೆ, ಫಳ ಫಳಿಸುವ ಸೂರ್ಯನ ಏನಾದರು ಕಣ್ಣು ಬಿಟ್ಟನೆಂದರೆ ಅಷ್ಟೆ , ಬೆಳಕಿನ ಪ್ರತಿಫಲನದಿಂದ 'ಲುಂಫೋ 'ದ ತುತ್ತ ತುದಿಯಲ್ಲಿ ನಿಂತು 'ಭಾರತ ಮಾತೆ'ಯ ರಕ್ಷಣೆ ಮಾಡುತ್ತಿರುವ ವೀರ ಯೋಧನ ಕಣ್ಣೆ ಶಾಶ್ವತವಾಗಿ ಕುರುಡಾಗುತ್ತವೆ.ಆದರು ಅವನು ಛಲ ಬಿಟ್ಟಿಲ್ಲ, ತಾಯ್ನೆಲದ ರಕ್ಷಣೆಗೆ ಟೊಂಕಕಟ್ಟಿ ನಿಂತವನ ಮೈ ಮುಚ್ಚಲು ಸರಿಯಾದ ಬಟ್ಟೆಗಳಿಲ್ಲ.

ಹೌದು, ಅದು ಅಕ್ಟೋಬರ್ ತಿಂಗಳು ೧೯೬೨ನೆ ಇಸವಿ. ಅತ್ತ ದೂರದ 'ಲುಂಫೋ'ದಲ್ಲಿ 'ಭರತ ಮಾತೆ'ಯ ವೀರ ಪುತ್ರ ಚಳಿ ಮಳೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದೆ, ಯಾರು ಇಲ್ಲದಂತಹ ನಿರ್ಜನ ಪ್ರದೇಶದಲ್ಲಿ ಅರೆಬೇತ್ತಲೆಯಾಗಿ ನಿಂತಿದ್ದಾರೆ,
ಇತ್ತ ದೂರದ 'ದೆಹಲಿ'ಯಲ್ಲಿ ಭವ್ಯವಾದ ಹವಾ ನಿಯಂತ್ರಿತ ಕೋಣೆಯಲ್ಲಿ ಗರಿ ಗರಿ ಇಸ್ತ್ರಿ ಮಾಡಿದ ಬಟ್ಟೆ, ಎಡಗೈನಲ್ಲಿ 'ಕೆಂಪು ಗುಲಾಬಿ' (ಪ್ರೀತಿಯ ಸಂಕೇತ) , ಬಲಗೈನಲ್ಲೊಂದು 'ಬಿಳಿ ಪಾರಿವಾಳ' (ಶಾಂತಿಯ ಸಂಕೇತ') ಹಿಡಿದು ನಿಂತಿದ್ದರು 'ಚಾ ಚಾ ನೆಹರು'!

ಭಾರತ-ಚೀನಾ ಯುದ್ಧ ಶುರುವಾಗಿದೆ, ನಮ್ಮ ಬಳಿ ಯೋಧರ ಸಂಖೆಯು ಕಡಿಮೆ, ಇದ್ದ ಧೀರ ಯೋಧರ ಬಳಿ ಬಟ್ಟೆ ,ಶೂ ,ಬಂದೂಕು, ಬಾಂಬೂ, ಕಾಡತೂಸು, ಕಡೆಗೆ 'ಆಹಾರ'ವು ಸರಿಯಾಗಿ ಇರಲಿಲ್ಲ.
ಆದರೆ ಇದಾವುದರ ಪರಿವೆ ಇಲ್ಲದವರಂತೆ 'ಚಾ ಚಾ ನೆಹರು' ಮೃಷ್ಟಾನ್ನ ಭೋಜನವನ್ನು ಮುಗಿಸಿ , ವಿಮಾನವೇರಿ 'ಇಂಗ್ಲೆಂಡ್,ನೈಜೀರಿಯ,ಶ್ರೀಲಂಖ'ದಲ್ಲಿ 'ಶಾಂತಿ' ಸಂದೇಶ ಸಾರಲು ಹೊರಟಿದ್ದರು. ಇಲ್ಲಿ ಭಾರತ ಚೀನಿ ಶತ್ರುಗಳ ಕೈಯಲ್ಲಿ ಸಿಕ್ಕಿ ನಲುಗುತ್ತಿದ್ದಾರೆ, ನಮ್ಮ 'so called' ಸ್ವಾತಂತ್ರ್ಯ ಹೋರಾಟಗಾರ ಪ್ರಪಂಚ ಪರ್ಯಟನೆ ಮಾಡುತ್ತಿದ್ದರು.

'ಕೃಷ್ಣನ್ ಮೆನನ್' ಎಂಬ ಒಬ್ಬ ರಕ್ಷಣಾ ಸಚಿವ, ದೇಶದ ರಕ್ಷಣೆಗೆ ಬಗ್ಗೆ ಯೋಚಿಸಬೇಕಾದವ 'ಚಾ ಚಾ'ನೊಂದಿಗೆ ವಿದೇಶ ಪ್ರಯಾಣ ಮಾಡುತ್ತಿದ್ದರು. ಜನರಲ್ ತೋಪರ್ ದಿಲ್ಲಿಯಲ್ಲಿ ಮಲಗಿದ್ದರೆ, ಜನರಲ್ ಕೌಲ ಸಂಸಾರ ಸಮೇತ ಕಾಶ್ಮೀರದಲ್ಲಿ ರಜೆಯಲ್ಲಿದ್ದ.

ಹೀಗೆ 'ಚಾ ಚಾ ನೆಹರು' ಎಂಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗು ಇತರೆ ಮೂವರು ಸೇರಿಕೊಂಡು ಅಖಂಡ ಭಾರತವನ್ನು ಚಿನಿಗಳ ಪಾದದ ಬಳಿ ಇಟ್ಟುಬಿಟ್ಟರು.

ಅಂದು ಚಾ ಚಾ ನೆಹರುರವರ ಹುಚ್ಚಾಟಕ್ಕೆ ಬಲಿಯಾದವರ ಸಂಖ್ಯೆ ಹತ್ತಿರ ೩-೪ ಸಾವಿರದಷ್ಟು. ಆ ವೀರ ಯೋಧರ ತಂದೆ,ತಾಯಿ,ಹೆಂಡತಿ,ಮಕ್ಕಳು,ಅನ್ನ,ಅಕ್ಕ,ತಮ್ಮಂದಿರ ಗೋಳು ಸಹ ಬಹುಷಃ ಭಾರತ ರತ್ನ ಚಾ ಚಾರಿಗೆ ಕೇಳಲೇ ಇಲ್ಲ. ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಾಂಧಿಜಿಯವರ ನಂತರದ 'ಶಾಂತಿ ದೂತ'ಎನಿಸಿಕೊಳ್ಳುವ ಹುಚ್ಚು ಹಂಬಲವಿತ್ತೆನೂ,
ಅದೇ ಕಾರಣದಿಂದಾಗಿ ಇಂದಿಗೂ 'ಕಾಶ್ಮೀರ' ಸಮಸ್ಯೆ ಎಂಬ ಭೂತ ಬೆಂಬಿಡದೆ ನಮ್ಮನ್ನು ಕಾಡುತ್ತಿದೆ. ೧೯೪೯ರಲ್ಲಿ ನಡೆದ 'ಭಾರತ-ಪಾಕಿಸ್ತಾನ' ಯುದ್ಧದಲ್ಲಿ ನಮ್ಮ ಸೈನಿಕರನ್ನು ಚಾ ಚಾ ತಡೆಯದಿದ್ದರೆ ಇವತ್ತಿಗೆ 'ಕಾಶ್ಮೀರ ಕಣಿವೆ' ಭಾರತ ಮಾತೆಯ ಕೀರೆಟವಾಗಿ ಮೆರೆಯುತಿತ್ತು. ಬಹುಷಃ ಈಗ ಕಾಡುತ್ತಿರುವ ಭಯೋತ್ಪಾದನೆ ಎಂಬ ಭೂತವು ಇರುತ್ತಿರಲಿಲ್ಲ. ಆದರೆ ಚಾ ಚಾ ರಕ್ತ ಪಾತ ಬೇಡ,ಇದನ್ನು ವಿಶ್ವ ಸಂಸ್ಥೆಗೆ ಕೊಂಡೊಯ್ದ ನಾನೇ ಪರಿಹರಿಸುವೆ ಅಂತ ಹೇಳುತ್ತಾ , ನಮ್ಮ ನಮ್ಮ ನಡುವಿನ ವಿಷಯವನ್ನು ಅಂತರರಾಷ್ಟ್ರೀಯ ವಿಷಯವನ್ನಾಗಿ ಮಾಡಿದರು. ಅವರು ಅಂದು ಮಾಡಿದ ತಪ್ಪಿನಿಂದಾಗಿ ಇಂದು ೨ ಶತ್ರು ರಾಷ್ಟ್ರಗಳು ಬಲಿತು ಕುಂತಿವೆ, ಅದು ಅಣ್ವಸ್ತ್ರದೊಂದಿಗೆ ನೆನಪಿರಲಿ.

ಅಂದು ಚೀನಾ 'ಟಿಬೆಟ್' ಅನ್ನು ವಶಪಡಿಸಿಕೊಂಡಾಗ ಇಡಿ ವಿಶ್ವವೇ ಅವರ ವಿರುದ್ಧ ತಿರುಗಿ ಬಿದ್ದಿತ್ತು, ಕೇವಲ 'ಚಾ ಚಾ ನೆಹರುವಿನ ಭಾರತ'ವೊಂದನ್ನು ಬಿಟ್ಟು. ಟಿಬೆಟ್ನ ಸ್ವಾತಂತ್ರ್ಯ ಹೋರಾಟಗಾರರು ಹೊರಜಗತ್ತಿನ ಬೆಂಬಲಕ್ಕೆ ಅಂಗಲಾಚುತಿದ್ದರು, ಇತ್ತ ವಿಶ್ವ ಸಂಸ್ಥೆಯಲ್ಲಿ 'ಚೀನಾ-ಟಿಬೆಟ್' ನ ವಿಷಯ ಪ್ರಸ್ತಾಪವಾದಗಳೆಲ್ಲ ಚೀನಾದ ಪರವಹಿಸಿದ್ದು 'ಚಾ ಚಾ ನೆಹರು'. ಅದು ಅವರಿಬ್ಬರ ಆಂತರಿಕ ವಿಷಯ ಅದರಲ್ಲಿ ನಾವು ತಲೆ ಹಾಕುವುದು ಬೇಡ ಅಂತ ಬೋಧನೆ ಮಾಡಿದ್ದು ಇದೆ ಚಾ ಚಾ.

ಬಹುಷಃ ಕಾಮನ್ ಸೆನ್ಸ್ ಇರುವಂತ ಮನುಷ್ಯನಿಗೆ ತಿಳಿಯಬಹುದಾದ ವಿಷಯವೇನೆಂದರೆ ಚೀನಾ ಟಿಬೆಟ್ ಅನ್ನು ಭಾರತದ ಮೇಲೆ ಸವಾರಿ ಮಾಡಲು ರಹದಾರಿಯಾಗಿ ಬಳಸುತ್ತದೆ ಎಂದು, ಅದು ನಮ್ಮ ಮುತ್ಸದ್ದಿಗೆ ತಿಳಿಯಲೇ ಇಲ್ಲ.
ಇಂದು ಅದೇ ಚೀನಾ ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಕೊಡುವುದನ್ನು ವಿರೋಧಿಸುತ್ತಿದೆ, ಅಮೇರಿಕಾದೊಂದಿಗಿನ ಅಣ್ವಸ್ತ್ರ ಒಪ್ಪಂದಕ್ಕೆ ಅಡ್ಡಿಪದಿಸುತ್ತದೆ.

ತಪ್ಪು ಮಾಡಿದ್ದು ಅವರು ಅನುಭವಿಸಬೇಕಾದವರು ನಾವು. ಇದೆಲ್ಲಿಯ ನ್ಯಾಯ ಚಾ ಚಾ???

ಅವಳ ಕಣ್ಣು

ದೂರದಿಂದಲೇ ಸೆಳೆದಿದ್ದವು ನನ್ನನ್ನು
ಅವಳ ಚೆಲುವ ನೀಲಿ ಕಣ್ಣುಗಳು.
ನೋಡು ನೋಡುತಿದ್ದಂತೆ ಬಂದೆ ಬಿಟ್ಟಳು ಹತ್ತಿರ
ಅವಳ ನೋಡಿದ ನನ್ನಲ್ಲಿ ಇರಲಿಲ್ಲ ಯಾವುದೇ ಉತ್ತರ.
ಮರುಕ್ಷಣವೇ ಏನೋ ಕಳೆದುಕೊಂಡ ಅನುಭವ ಮನದಲ್ಲಿ,
ಕಾಣೆಯಾಗಿದ್ದು ನನ್ನ 'ಪ್ರೀತಿಯ ಹೃದಯ'ವಾ ?
ಎಂದು ಯೋಚಿಸುವಷ್ಟರಲ್ಲಿ ಬಂದೆ ಬಿಟ್ಟಿತ್ತು ನನ್ನ ನಿಲ್ದಾಣ
ಇಳಿದು ಜೇಬು ತಡವಿದಾಗಲೇ ತಿಳಿದದ್ದು
ಆ ಹುಡುಗೀ ಕದ್ದದ್ದು 'ಪ್ರೀತಿಯ ಹೃದಯ' ಅಲ್ಲ
ನನ್ನ 'ಪ್ರೀತಿಯ ಪರ್ಸ್' ಎಂದು!!!

- ರಾಕೇಶ್ ಶೆಟ್ಟಿ Smiling

Wednesday, December 3, 2008

ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?

"ಸಾಮಾನ್ಯವಾಗಿ ಎಲ್ಲರೂ ಬದುಕಿ ಸಾಯುತ್ತಾರೆ, ಆದರೆ ಇವರು ಸತ್ತು ಬದುಕಿದ್ದಾರೆ"
ಈ ಮಾತನ್ನು ನಾನು ಹೇಳಿದ್ದು, ನಿನ್ನೆ ಭಾರತವನ್ನು ಬೆಚ್ಚಿ ಬೀಳಿಸಿದ ಮುಂಬೈನ ಮಾರಣ ಹೋಮದಲ್ಲಿ ವೀರ ಮರಣವನ್ನಪ್ಪಿದ, ನಮ್ಮ ನಾಳೆಗಳಿಗೆ ಅವರ ಅಮೂಲ್ಯ ಜೀವವನ್ನು ಮುಡಿಪಿಟ್ಟು ಹುತಾತ್ಮರಾದ 'ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಆಪ್ಟೆ ಹಾಗೂ ಪೋಲಿಸ್ ಮತ್ತು ವೀರ ಯೋಧ'ರ ಬಗ್ಗೆ.

ಮುಂಬೈ ಮಾರಣ ಹೋಮದ ವಿಷಯ ತಿಳಿದು ಒಂದು ಕ್ಷಣ ಬೆಚ್ಚಿ ಬಿದ್ದೆ, ಎಲ್ಲೆಲ್ಲೂ ಕೇಳಿ ಬಂದ ಸುದ್ದಿ ಮುಂಬೈನ ಬಗ್ಗೆಯೇ. ಆದರೆ ಅದಕ್ಕಿಂತ ಹಿಂಸೆ ಎನಿಸಿದ್ದು ಅಲ್ಲೂ ಧರ್ಮದ ವಿಷಯ ಇಣುಕಿ ಬಂತು ನೋಡಿ ಆವಾಗ. ಉಗ್ರರು ಅಷ್ಟು ರಾಜರೋಷವಾಗಿ ಮುಂಬೈಗೆ ಬಂದಿದ್ದಾರು ಹೇಗೆ ಅಂತ ನೋಡಿದರೆ ಅವರು ಬಂದಿದ್ದು ಜಲ ಮಾರ್ಗದಲ್ಲಿ ಅಂತ ಪೋಲಿಸ್ ಮೂಲಗಳು ಹೇಳಿದ್ದು, ಅದಕ್ಕೆ ಬರುತಿದ್ದ ಪ್ರತಿಕ್ರಿಯೆಗಳನ್ನೂ ನೋಡಬೇಕು, ಅಬ್ಬಾ!!

ಒಂದು ಕಡೆ ಎ.ಟಿ.ಎಸ್ ನವರು ಕೈ ತೊಳೆದುಕೊಂಡು ಕೇವಲ ಮಾಲೆಗಾವ್ ಸ್ಪೋಟದ ಆರೋಪಿಗಳ ಹಿಂದೆಯೇ ಬಿದ್ದಿದ್ದರು, ಅದಕ್ಕೆ ಅವರಿಗೆ ಉಗ್ರರ ಜಾಡು ತಿಳಿಯಲಿಲ್ಲ ಎಂಬ ರೀತಿಯ ಮಾತುಗಳು ಬಂದರೆ,
ಮತ್ತೊಂದು ಕಡೆ ಕೆಲವು ಮಾಧ್ಯಮಗಳಲ್ಲಿ ಉಗ್ರರ ಫೋಟೋ ತೆಗೆದಿದ್ದರಲ್ಲಾ ಅದರ ಆಧಾರದಲ್ಲಿ ಉಗ್ರರ ಮೂಲ ಪತ್ತೆ ಮಾಡುವ ಬದಲು, ಉಗ್ರರ ಧರ್ಮವನ್ನು ಪತ್ತೆ ಹಚ್ಚುವಂತ ಕೆಲಸ ನಡೆಯ್ತುತಿತ್ತು.

ಅಲ್ಲ ಸ್ವಾಮಿ, ಇಂತ ಸಂದಿಗ್ದ ಸಮಯದಲ್ಲೂ ಈ ಧರ್ಮವನ್ನು ಮದ್ಯೆ ಎಳೆದು ತರುವ ರಾಜಕಾರಣಿಗಳು,ವಿಚಾರವಾದಿಗಳು,ಬುದ್ದಿಜೀವಿಗಳು,ಕೋಮುವಾದಿಗಳಿಗೆ ಮನುಷ್ಯತ್ವ ಅನ್ನುವುದು ಇದೆಯಾ ಅಥವಾ ಅವರುಗಳಿಗೆ ಆ ಪದದ ಅರ್ಥವಾದರೂ ತಿಳಿದಿದೆಯಾ ಅನ್ನಿಸುತ್ತೆ. ಸತ್ತವನ ರಕ್ತದಲ್ಲಿ ಅವನ ಧರ್ಮ ಕಾಣುತ್ತಾ? ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?
ಭಾವನಾತ್ಮಕ ವಿಷಯಗಳಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಇಂತ ಜನರನ್ನು ದೂರವಿಡದಿದ್ದರೆ, ಭಾರತ ಭಾರತವಾಗಿ ಉಳಿಯುವುದೇ ಇಲ್ಲ.

ಸಂಸತ್ ದಾಳಿಯ ಸೂತ್ರಧಾರನನ್ನು ಹಿಡಿದು ತಂದರೆ , ಚಿಲ್ಲರೆ ವೋಟುಗಳಿಗಾಗಿ ಆಫ್ಜ್ಯಲ್ ಅನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ. ಇಂತವರಿಗೆ ಯಾವುದರಲ್ಲಿ ಹೊಡೆಯಬೇಕು?
ಮೊನ್ನೆ ಮೊನ್ನೆ ತಾನೆ ಗುಜರಾತಿನಲ್ಲಿ ನಡೆದ ಸ್ಪೋಟದ ತನಿಖೆ ವೇಳೆ ಪೋಲಿಸ್ ಎನ್ ಕೌಂಟರ್ನಲ್ಲಿ ಉಗ್ರರ ಹತ್ಯೆಮಾಡಲಾಗಿತ್ತು. ಆಗ ಅದೆಲ್ಲಿಂದ ಎದ್ದು ಬಂದನೋ ಈ ಅಮರ್ ಸಿಂಗ್ , ಅವನಿಗೆ ಅಲ್ಲಿ ಹುತಾತ್ಮರಾದ ಪೋಲಿಸ್ ಅಧಿಕಾರಿಯ ಬಗ್ಗೆ ಏನು ಅನ್ನಿಸುವುದಿಲ್ಲ, ಆದರೆ ಹತರಾದ ಉಗ್ರರ ಬಗ್ಗೆ ಸಿಂಪತಿ ತೋರಿಸುತ್ತಾನೆ?
ಶಂಕಿತ ಉಗ್ರರನ್ನು ಪೊಲೀಸರು ಸೆರೆ ಹಿಡಿದು ತಂದರೆ ಅಲ್ಲೂ ಧರ್ಮವನ್ನು ಎಳೆದು ತಂದವರು ಲಾಲೂ, ಪಾಸ್ವಾನ್ ತರದ ಕೆಟ್ಟ ಜನ . ಬ್ರೂಕರ್ ವಿಜೇತೆ ಅರುನ್ದತಿಗೂ ಪೊಲೀಸರ ಮೇಲೆಯೇ ಸಂಶಯ ಬರುತ್ತೆ.
ಇನ್ನು ಮಾಲೆಗಾವ್ ಆರೋಪಿಗಳು ಸಿಕ್ಕಿದಾಗಲಂತೂ ಇವರಿಗೆಲ್ಲ ಹಬ್ಬವೇ, ಯಾವನೋ ತಲೆ ಮಾಸಿದವ ಮಾಡಿದ ತಪ್ಪಿಗೆ ಒಂದಿಡಿ ಧರ್ಮವನ್ನು ತಂದುಬಿಡುವುದೇ? ಅಡ್ವಾಣಿ ಹಾಗೂ ಕೆಲವರಂತೂ ಎ.ಟಿ.ಎಸ್ ನವರ ಕಮಿಟ್ಮೆಂಟ್ ಬಗ್ಗೆಯೇ ಮಾತನಾಡುತ್ತಾರೆ? ಕಮಿಟ್ಮೆಂಟ್ ಇಲ್ಲದ ಅಧಿಕಾರಿಯಾಗಿದ್ದರೆ ಹೇಮಂತ್
ಅವರಂತಹ ಹಿರಿಯ ಅಧಿಕಾರಿ ಬಲಿಯಾಗುತಿದ್ದರೆ?

" ನನ್ನನ್ನು 'ಚಕಮಕಿ ಚತುರ' ಅನ್ನಬೇಡಿ ಹಾಗೆ ಹೇಳಿದರೆ, ಇವನಿಗೆ ಎನ್ಕೌಂಟರ್ ಮಾಡುವುದೇ ಹವ್ಯಾಸ ಅಂತ ಮಾನವ ಹಕ್ಕು ಆಯೋಗದವರು ನನ್ನ ಹಿಂದೆ ಬೀಳುತ್ತಾರೆ" ಅಂತ ಹೇಳಿದ್ದು , ಮೊನ್ನೆ ಹುತಾತ್ಮರಾದ ವಿಜಯ್ ಸಾಲಸ್ಕರ್ ಅವರು, ಅವರ ಹೇಳಿಕೆಯನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಇಂತ ಅಧಿಕಾರಿಗಳು ಎಷ್ಟು ಒತ್ತಡದ ನಡುವೆ ಕೆಲಸ ಮಾಡುತ್ತಾರೆ ತಿಳಿಯುತ್ತದೆ.

'ಇನ್ನು ಮುಂದೆ ಎಚ್ಚರ ವಹಿಸಲಾಗುತ್ತದೆ, ಇಂತ ವಿದ್ವಂಸಕ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ' ಅಂತ ಶಿವರಾಜ್ ಪಾಟೀಲರು ಭಾಷಣ ಮಾಡಿದ್ದೆ ಬಂತು, ಇಂಟೆಲಿಜೆನ್ಸ್ ಅನ್ನು ದೇಶದ ವೈರಿಗಳ ಚಲನ ವಲನದ ಮೇಲೆ ಕಣ್ಣಿಡಲು ಬಳಸುವುದನ್ನು ಬಿಟ್ಟು ವೀರೋಧ ಪಕ್ಷದ ನಾಯಕರ ಹಿಂದೆ ಬಿಟ್ಟರೆ, ಇಂಟೆಲಿಜೆನ್ಸ್ ಫೈಲ್ ಆಗದೆ ಇರುತ್ತಾ?

ಉರಿವ ಚಿತೆಯಲ್ಲೂ ಚಳಿ ಕಾಯಿಸಿ ಕೊಳ್ಳುವ ಜನ ಇವರು.

ತಮ್ಮ ಪ್ರಾಣವನ್ನು ಪಣಕಿಟ್ಟು ಉಗ್ರರೊಡನೆ ಹೋರಾಡುವ ಯೋಧರ ಬಗ್ಗೆ ಯೋಚಿಸುವುದು ಬೇಡವೇ, ಅವರಿಗೂ ನಮ್ಮಂತೆಯೇ ತಂದೆ,ತಾಯಿ,ಹೆಂಡತಿ,ಮಕ್ಕಳು ,ಅಕ್ಕ ತಂಗಿ,ತಮ್ಮ,ಅಣ್ಣ ಎಲ್ಲ ಇರುತ್ತಾರೆ, ಅವರು ಮನುಷ್ಯರೇ ಅಲ್ಲವೇ?

ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮುಗ್ದ ಜೀವಗಳಿಗೆ ಹಾಗೂ ಮಹಾನ್ ಅಧಿಕಾರಿಗಳಿಗೆ, ಯೋಧರಿಗೆ ನನ್ನ ನುಡಿ ನಮನ.