Sunday, April 12, 2009

'ಹಿಂದೂ' ಎಂದರೆ??

'ಜೇನು ಗೂಡಿ'ಗೆ ಕಲ್ಲು ಹೊಡೆಯಲೋ ಬೇಡ್ವೋ ಅಂತ ಯೋಚನೆ ಮಾಡಿ,ಹೊಡೆಯುವ ತೀರ್ಮಾನ ಮಾಡಿದ್ದೇನೆ.

'ಹಿಂದೂ' ಅನ್ನುವುದು ಧರ್ಮನಾ? ಅಥವಾ ಜೀವನ ಪದ್ಧತಿನಾ? ಹಿಂದೂ ಅಂದರೆ ಯಾರು? ಹಿಂದೂ ಧರ್ಮ ಅಂದರೆ ಯಾವುದು? ಇತ್ಯಾದಿ ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಓದಿದ್ದು,ಕೇಳಿದ್ದು,ನೋಡಿದ್ದನ್ನು ಸ್ವಲ್ಪ ಕದ್ದು Eye-wink ಜೊತೆಗೆ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳುತಿದ್ದೇನೆ.ಈ ಲೇಖನ ಓದುತ್ತ ಓದುತ್ತ ಎಲ್ಲೋ ಓದಿದ ಹಾಗೆ ಇದೆ ಅನ್ನಿಸಿದ್ರೆ, ಬೈಕೋಬೇಡಿ ಯಾಕೆಂದ್ರೆ ಹಿಂದೂ ಧರ್ಮ ಅನ್ನುವ ಸಮುದ್ರದ ಆಳ-ಅಗಲಗಳ ಪರಿಚಯವಿರುಷ್ಟು ಬುದ್ದಿವಂತ ನಾನಲ್ಲ Smiling ಅಲ್ಲಿ ಇಲ್ಲಿ ಸಿಕ್ಕಿದ್ದನ್ನು ಸೇರಿಸಿ ಸಂಕ್ಷಿಪ್ತವಾಗಿ ಇಲ್ಲಿಡುವ ಕೆಲಸ ಮಾಡಿದ್ದೇನೆ ಅಷ್ಟೆ.

ಹಿಂದುತ್ವ- 'ತಮಸೋಮಾ ಜ್ಯೋತಿರ್ಗಮಯ’ ಎನ್ನುತ್ತದೆ. ಅಂದರೆ, "ಕತ್ತಲಿನಿಂದ ಬೆಳಕಿನೆಡೆಗೆ ಸಾಗೋಣ" ಹಾಗೂ ಹಿಂದೂ ಧರ್ಮದ ಮೂಲಭೂತ ತತ್ತ್ವ- “ಸತ್ಯವು ಏಕಮೇವಾದ್ವಿತೀಯವಾಗಿದೆ’ ಎಂದು.

ಹಿಂದೂ ಧರ್ಮದ ಅರಾಧ್ಯ ದೇವತೆಯೆಂದರೆ,ಅದು ಪ್ರಕೃತಿಯೇ.ಜೀವಧಾರಣೆಗೆ ಅಗತ್ಯಬಿರುವ ಪಂಚಭೂತಗಳ ಆರಾಧನೆಯೇ ಅಂದಿನ ರೂಢಿಯಾಗಿತ್ತು. ಶಾಖ-ಬೆಳಕು ನೀಡುವ ಸೂರ್ಯ, ದೈನಂದಿನ ಕಾರ್ಯಗಳಿಗೆ ಅಗತ್ಯನಾದ ಅಗ್ನಿ, ಕೃಷಿಗೆ ಅನುಕೂಲನಾದ ವರುಣ, ಮಳೆಯ ಅಧಿಪತಿಯಾದ ಇಂದ್ರ, ಜೀವನಾಧಾರನಾದ ವಾಯು- ಇವರೆಲ್ಲ ವೇದಕಾಲದ ದೇವತೆಗಳು.

ಹಿಂದೂ ಧರ್ಮದ ವ್ಯಾಖ್ಯೆಯಂತೆ, ಭಗವಂತ ಎಂದರೆ ಪ್ರಕೃತಿ. ಭಗವಂತ ಎಂದರೆ ಪುರುಷ. ಭಗವಂತ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ, ಲಕ್ಷ್ಮಿ, ಪಾರ್ವತಿ, ಸರಸ್ವತಿ… ಯಾರು ಬೇಕಾದರೂ. ಜೀವನದ ಅವಶ್ಯಕತೆಗೆ ತಕ್ಕಂತೆ ಇಲ್ಲಿ ಭಗವಂತ ರೂಪುಗೊಳ್ಳುತ್ತಾನೆ.ಅಂತೆಯೇ ರೈತನಿಗೆ ಮಣ್ಣೂ ದೇವರಾಗುತ್ತದೆ. ಸೈನಿಕನಿಗೆ ಮಾತೃಭೂಮಿ ದೇವತೆಯಾಗುತ್ತಾಳೆ. ಬೆಸ್ತನಿಗೆ ನದಿ ದೇವಿಯಾಗುತ್ತಾಳೆ.ಅಗೋಚರ ಶಕ್ತಿಯಾದ ಭಗವಂತನನ್ನು ಗ್ರಹಿಕೆಯ ವ್ಯಾಪ್ತಿಗೆ ಎಷ್ಟು ದಕ್ಕುತ್ತದೆಯೋ ಅಷ್ಟನ್ನು ಗ್ರಹಿಸಿ, ಆರಾಧಿಸುವುದು. ಆ ಮೂಲಕ ಭೂಮಿಯ ಮೆಲಿನ ತನ್ನ ಜೀವನ ನಿರ್ವಹಣೆಗೆ ಅಗತ್ಯ ಸಹಾಯವನ್ನು ಪಡೆಯುವುದು.

ಹಿಂದೂ ಧರ್ಮವು ‘ಧಾರ್ಮಿಕ ಮುಖಂಡ’ನೆಂದು ಕರೆಯಲ್ಪಡುವವನ ನಂಬಿಕೆ ಮತ್ತು ಅನುಭವಗಳಿಗಿಂತ ಹೆಚ್ಚಾಗಿ ಆತನ ನಡವಳಿಕೆಯ ಮೇಲೆ ತನ್ನ ನಂಬಿಕೆಯನ್ನು ಸ್ಥಾಪಿಸಿಕೊಳ್ಳುತ್ತದೆ.“ನಾನು ನಿಮ್ಮ ಮುಂದಾಳು, ನನ್ನನ್ನು ಅನುಸರಿಸಿ” ಎಂದು ಆದೇಶ ಮಾಡುವವನ ಅರ್ಹತೆಯನ್ನು ಇಲ್ಲಿ ಜನರೇ ನಿರ್ಧರಿಸುತ್ತಾರೆ. ಇಲ್ಲಿ ಮೌಢ್ಯಕ್ಕೆ, ಅಂಧ ಶ್ರದ್ಧೆಗೆ ಅವಕಾಶವಿರಲಿಲ್ಲ. (ಕಲುಷಿತ ಹಿಂದೂ ಜಾತಿಯ ಪರಿಸ್ಥಿತಿ ಇದಕ್ಕಿಂತ ಭಿನ್ನ. ಇಲ್ಲಿ ಢೋಂಗಿ ಗುರು ಶಿಷ್ಯರಿದ್ದಾರೆ, ಮೂಢ ಭಕ್ತರೂ ಇದ್ದಾರೆ).

ಹಿಂದುತ್ವದ ಮೇಲಿರುವ ‘ಪುರೋಹಿತಷಾಹಿ’ ಅಪವಾದ, ವಾಮಪಂಥೀಯರು ಹೊರಿಸಿದ ಮಿಥ್ಯಾರೋಪವಷ್ಟೆ.ಇಲ್ಲವಾದಲ್ಲಿ ಭಾರತದ ಅನೇಕಾನೇಕ ಅಧ್ಯಾತ್ಮಿಕ ಪಂಥಗಳ ಮುಖಂಡರು, ಸಂತರು, ಅಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿರಲು ಸಾಧ್ಯವಿರುತ್ತಿರಲಿಲ್ಲ. ಪ್ರಾಕ್ಟಿಕಲ್ ಆಗಿ ನೋಡದೆ ಕೇವಲ ಥಿಯರಿಯನ್ನೇ ಓದಿ, ಕೈ ತೊಳೆದುಕೊಂಡು ಬ್ರಾಹ್ಮಣರ ಹಿಂದೆ ಬಿದ್ದಿರುವ ನಮ್ಮ ಬುದ್ದಿ ಜೀವಿ(?)ಗಳಿಗೆ ಜಾತಿ ಪದ್ದತಿಯಲ್ಲಿ ಬ್ರಾಹ್ಮಣೆತರ ಮೇಲ್ಜಾತಿಯವರ ದಬ್ಬಾಳಿಕೆ ಇತ್ತು ಹಾಗು ಇದೆ ಅಂತ ಹೇಳೋಕೆ ಪಾಪ ಬರೋದೇ ಇಲ್ಲ ಬಿಡಿ.

ಭಾರತ ಕಂಡ ಅಪ್ರತಿಮ ತತ್ತ್ವಶಾಸ್ತ್ರಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಂದೆಡೆ ಹೀಗೆ ಹೇಳಿದ್ದಾರೆ, “ ಪ್ರವಾದಿಯೊಬ್ಬನನ್ನೇ ಆಧಾರವಾಗಿಟ್ಟುಕೊಂಡ ಧರ್ಮವು ಸಂಕುಚಿತ , ತೀವ್ರಗಾಮಿ, ಅಸಹಿಷ್ಣು ಮತ್ತು ಸ್ನೇಹಭಾವದ ಕೊರತೆಯಿಂದ ಕೂಡಿರುತ್ತದೆ. ಸನಾತನ ಧರ್ಮವು ಪರಿತ್ಯಾಗ ಮತ್ತು ಶಾಂತಿ- ಸೌಹರ್ದತೆಗಳಿಂದ ಕೂಡಿರುತ್ತವೆ”. ಅವರು ಪ್ರಶ್ನಿಸುತ್ತಾರೆ, “ ಯಾವುದೆ ಅಧಿಕೃತ ವ್ಯಕ್ತಿಯನ್ನು ಪ್ರಶ್ನಿಸುವ ಅವಕಾಶವಿಲ್ಲದ ರೋಮನ್ ಕ್ಯಾಥೊಲಿಕ್ ಸಮಾಜಗಳಲ್ಲಿ ಹಿಟ್ಲರ್, ಮುಸೊಲಿನಿಯಂಥವರು ಜನಿಸಿದ್ದು ಒಂದು ಆಕಸ್ಮಿಕವೇ?” ಎಂದು.

ಹಿಂದೂ ಧರ್ಮದ ಅತ್ಯಂತ ಪ್ರಮುಖ ಧನಾತ್ಮಕ ಅಂಶ- ಅದರ ವೈಶಾಲ್ಯತೆ. ಅದು, ತನಗೆ ಸೇರದ ಇತರರನ್ನು ದ್ರೋಹಿಗಳೆಂದು ಬಗೆಯುವುದಿಲ್ಲ. ಕ್ರೌರ್ಯದಿಂದ,ಬಲವಂತದಿಂದ ಇತರ ಮತಗಳ ಜನರನ್ನು ತನ್ನ ವ್ಯಾಪ್ತಿಗೆ ಕರೆತಂದು, ವೈವಿಧ್ಯತೆಯನ್ನು ನಾಶ ಮಾಡಿ, ಯಾಂತ್ರೀಕೃತ ತನ್ನನ್ನು ಅನುಸರಿಸುವ ಬಣವನ್ನು ಸೃಷ್ಟಿಸುವುದು ಅದಕ್ಕೆ ಬೇಕಿಲ್ಲ. ಇತಿಹಾಸದ ಯಾವ ಹಂತದಲ್ಲಿಯೂ ಹಿಂದೂಗಳು ಬಲಾತ್ಕಾರದ ಮತಾಂತರ ನಡೆಸಿದ್ದನ್ನು ನೀವು ನೋಡಲಾರಿರಿ.

ಹಿಂದೂ ಧರ್ಮ ಎಂದಿಗೂ ನಮ್ಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದಿಲ್ಲ. ಬಹುಷಃ ಅದಕ್ಕೆ ನಮ್ಮ ಧರ್ಮದಲ್ಲೇ ಅತಿ ಹೆಚ್ಚು ಬುದ್ದಿ ಜೀವಿ(?) ಗಳಿರುವುದು ಅನ್ನಿಸುತ್ತೆ. ಹಿಂದೂ ಧರ್ಮದ ಕೆಲವು ಆಚರಣೆಗಳು ಕೆಲವರಿಗೆ 'ಮೂಢ ನಂಬಿಕೆ' ಅನ್ನಿಸುತ್ತದೆ, ಆದರೆ ಈ ಧರ್ಮದಲ್ಲಿ ಎಲ್ಲವೂ ಸಲ್ಲುತ್ತದೆ.ಇಲ್ಲಿ ದೇವರಿಲ್ಲ ಅಂತ ಹೇಳಿದರು ನಡೆಯುತ್ತೆ, ದೇವರಿದ್ದಾನೆ ನಾನು ಅವನೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು ನಡೆಯುತ್ತೆ. ಯಾರು ನಿಮಗೆ ಶಿಕ್ಷೆ/ಫತ್ವಾ ವಿದಿಸುವುದಿಲ್ಲ.

ಆದರೆ ಜಗತ್ತಿನಲ್ಲೇ ಪ್ರಗತಿ ಪರ ಧರ್ಮ ಎಂದು ಹೇಳಿಕೊಳ್ಳುವವರು, 'ಚರ್ಚಿನ ಕೆಲವು ನಂಬಿಕೆಗಳು' ತಪ್ಪು ಅಂತ ಹೇಳಿದ ಮಹಾನ್ ವಿಜ್ಞಾನಿಗಳಿಗೆ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ. ವೈಜ್ಞಾನಿಕ ವಿಚಾರಗಳಿಗೆ ಹಾಗೂ ಸಂಶೋಧನೆಗಳಿಗೆ ಹಿಂದೂ ಧರ್ಮ ಎಂದಿಗೂ ಅಡ್ಡಿಯುಂಟು ಮಾಡಿಲ್ಲ.ಜೆರುಸಲೆಂ ಎಂಬ ಪವಿತ್ರ ಭೂಮಿಗಾಗಿ 'ಕ್ರುಸೇಡ್ - ಜಿಹಾದ್' ಅನ್ನು ನಡೆಸಿ ಸಾವಿರಾರು ಸಾವು - ನೋವುಗಳಿಗೆ ಕಾರಣವಾಗಿದ್ದು ಹಿಂದೂ ಧರ್ಮವಲ್ಲ.ಈ ಜಗತ್ತಿನಲ್ಲಿ ಮುಸಲ್ಮಾನರಲ್ಲದವರೆಲ್ಲರು ಕಾಫಿರರು,ಅವರಿಗೆ ಇರುವುದು ಎರಡೇ ದಾರಿ, ಒಂದು ಅಲ್ಲಾನನ್ನು ನಂಬಬೇಕು, ಇಲ್ಲವೇ ಅವರಿಗೆ ಈ ಜಗತ್ತಿನಲ್ಲಿ ಬದುಕುವ ಅರ್ಹತೆಯೇ ಇಲ್ಲ ಅಂತ ದ್ವೇಷದ ಬಿಜ ಬಿತ್ತಿದ್ದು ಖಂಡಿತ ಹಿಂದೂ ಧರ್ಮ ಅಲ್ಲ.

ದಕ್ಷಿಣ ಆಫ್ರಿಕಾದ ನಾಯಕ ಡೆಸ್ಮಂಡ್ ಟುಟು ಅವರು ಹೇಳಿದ್ದರು "ನಮ್ಮ ಭೂಮಿಗೆ ಮಿಶನರಿಗಳು ಬಂದಾಗ ಅವರ ಕೈಯಲ್ಲಿ ಬೈಬಲ್ ಇತ್ತು, ನಮ್ಮ ಕೈಯಲ್ಲಿ ಭೂಮಿ ಇತ್ತು. ಆದರೆ ನಾವು ಪ್ರಾರ್ಥನೆಗೆಂದು ಮುಚ್ಚಿದ್ದ ಕಣ್ಣು ತೆರೆಯುವಷ್ಟರಲ್ಲಿ ನಮ್ಮ ಕೈಯಲ್ಲಿ ಬೈಬಲ್ ಇತ್ತು, ನಮ್ಮ ಭೂಮಿ ಅವರ ಕೈಯಲ್ಲಿ ಇತ್ತು" ಹೀಗೆ ಅನ್ಯ ಧರ್ಮಿಯರ ಪರಿಧಿಯೊಳಗೆ ಹಿಂದೂ ಧರ್ಮವೆಂದು ಅತಿಕ್ರಮಣ ಮಾಡಿಲ್ಲ. ಶತ್ರು ಕ್ಷಮೆ ಕೋರಿ ಬಂದಾಗ ಅವನಿಗೆ ಕ್ಷಮೆ ನೀಡಿದ ಧರ್ಮ ನಮ್ಮದು. ಅಂದು ಪೃಥ್ವಿರಾಜ್ ಚೌಹಣ ಮಹಮ್ಮದ್ ಘೋರಿಯನ್ನು ಕ್ಷಮಿಸಿ ಜೀವದಾನ ಮಾಡಿದ ತಪ್ಪಿಗೆ ತನ್ನ ಜೀವವನ್ನೇ ಕಳೆದುಕೊಂಡ. ಅದೇ ಘೋರಿ ಮುಂದೆ ಭಾರತದಲ್ಲಿ ಮಾಡಿದ ಅನಾಹುತಗಳ ಕುರುವು ಇನ್ನು ನಮ್ಮ ಕಣ್ಣ್ ಮುಂದಿದೆ.

"ದೇವರೊಂದೇ ನಾಮ ಹಲವು" ಎಂದು ನಮ್ಮ ಧರ್ಮದಲ್ಲಿ ಹೇಳುತ್ತಾರೆಯೇ ಹೊರತು, ವಿಗ್ರಹ ಆರಾಧನೆ ತಪ್ಪು ಎಂದೋ,ಇಲ್ಲ ಬೇರೆಯವರ ಆಚರಣೆ ಅಥವಾ ಅವರ ನಂಬಿಕೆ ಬಗ್ಗೆ ಹಿಂದೂ ಧರ್ಮ ಯಾವತ್ತು ಪ್ರಶ್ನೆ ಮಾಡೋಲ್ಲ. ಧರ್ಮವನ್ನು ವ್ಯಾಪರದಂತೆ ಮಾಡಿಕೊಂಡು ಮತಾಂತರವೆಂಬ ವ್ಯಾಪಾರ ಮಾಡಿ ತನ್ನ ಧರ್ಮಿಯರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ದುರಾಸೆಯು ಹಿಂದೂ ಧರ್ಮಕ್ಕಿಲ್ಲ.

ನಿಜ ನಮ್ಮ ಧರ್ಮದಲ್ಲೂ 'ಅಸ್ಪೃಶ್ಯತೆ, ಜಾತಿ ಪದ್ಧತಿ' ಯೆಂಬ ಅನಿಷ್ಟ ಇತ್ತು (ಈಗಲೂ ಕೆಲ ಕಡೆ ಇರಬಹುದು),ಅದನ್ನೇ ಹಿಡಿದು ಹಿಂದೂ ಧರ್ಮವನ್ನು ದೂಷಿಸುವ ಜನರಿಗೆ ಅನ್ಯ ಧರ್ಮದಲ್ಲಿ ಆ ರೀತಿ ಪದ್ಧತಿ ಇದೆ ಅನ್ನವುದು ಕಣ್ಣಿಗೆ ಕಾಣುವುದಿಲ್ಲ.

ನಮ್ಮ ಮನೆಯ ವಾಸ್ತು ಸರಿಯಾಗಿಲ್ಲ ಅಂದ್ರೆ ಅದನ್ನ ದುರಸ್ತಿ ಮಾಡಬಹುದು, ಇಲ್ಲ ಬೀಳಿಸಿ ಕಟ್ಟಬಹುದು, ಅದು ಬಿಟ್ಟು 'ಮನೆ ಬಿಟ್ಟು ಓಡಿ ಹೋಗುವುದು' ಎಷ್ಟು ಸರಿ??
ಈಗ ಆಗುತ್ತಿರುವುದು ಅದೇ, ಮನೆ ಬಿಟ್ಟು ಓಡುತ್ತಿರುವವರಿಗೆ, ಬುದ್ದಿ ಜೀವಿಗಳು ಹಾಗು ಜಾತ್ಯತಿತವಾದಿಗಳು 'ಓಡಿ ಓಡಿ ತಿರುಗಿ ನೋಡದ ಹಾಗೆ ಓಡಿ ನಿಮ್ಮ ಸ್ವಂತ ಮನೆ ಸರಿ ಮಾಡ್ಕೋಬೇಡಿ' ಅಂತ ಹೇಳ್ತಾ ಇದ್ದಾರೆ. ಬಾಡಿಗೆ ಮನೆಯಲ್ಲಿರುವವರ ಪಾಡು ಇರುವವರಿಗೆ ಗೊತ್ತು! ಪಾಪ Sad

ಮೊದಲೇ ಹೇಳಿದ ಹಾಗೆ ಹಿಂದೂ ಧರ್ಮ ಒಂದು ಸಮುದ್ರದಂತೆ ನನ್ನ ಬೊಗಸೆಗೆ ಸಿಕ್ಕಷ್ಟನ್ನು ಮಾತ್ರ ನಾನು ಹೇಳಿದ್ದೇನೆ. ತಿಳಿದವರು ತಮ್ಮ ಅಭಿಪ್ರಾಯವನ್ನು ಸೇರಿಸಿದರೆ ನಮ್ಮ ಧರ್ಮದ ಬಗ್ಗೆ ಇನ್ನು ಹೆಚ್ಚು ತಿಳಿಯಬಹುದು, ಅಲ್ಲವೇ?

ಭಾರತೀಯರೇ ಇಲ್ಲದ ಭಾರತ!!

ಅಮೆರಿಕನ್ ಪ್ರಜೆ ಒಬ್ಬ ಭಾರತಕ್ಕೆ ಭೇಟಿ ನೀಡಿ ತನ್ನ ದೇಶಕ್ಕೆ ವಾಪಸಾದ, ಅಲ್ಲಿ ಅವನ ಭಾರತೀಯ ಗೆಳೆಯ, ಅಮೆರಿಕನ್ ಪ್ರಜೆಯನ್ನು ಕೇಳಿದ,

"ನನ್ನ ದೇಶದ ಬಗ್ಗೆ ನಿನಗೆ ಏನನ್ನಿಸಿತು?"

ಅಮೆರಿಕನ್ ಹೇಳಿದ,
"ಇಂಡಿಯಾದ ಭವ್ಯ ನಾಗರಿಕತೆ, ಅಲ್ಲಿನ ಜನರ ಪ್ರೀತಿ, ಅಮೋಘ ಇತಿಹಾಸ, ಶಿಲ್ಪಿ ಕಲೆ, ಅಲ್ಲಿನ ನೈಸರ್ಗಿಕ ಸಂಪತ್ತು,ವಾವ್! ಎಲ್ಲವು ಅದ್ಭುತ"

"ಅದು ಖುಷಿಯ ವಿಚಾರ, ಸರಿ 'ಇಂಡಿಯನ್ಸ್' ಬಗ್ಗೆ ನಿನಗೆ ಏನನ್ನಿಸಿತು?"

"ಇಂಡಿಯನ್ಸ್!?ಯಾರದು??, ನನಗೆ ಒಬ್ಬನೇ ಒಬ್ಬ ಭಾರತೀಯ ಸಿಗಲಿಲ್ಲ "

"ಏನು ಇಂಡಿಯಾದಲ್ಲಿ,ಇಂಡಿಯನ್ಸ್ ಸಿಗಲಿಲ್ಲವೇ?ಏನು ಮಾತಾಡುತಿದ್ದಿಯಾ?ಇಂಡಿಯದಲ್ಲಿ ಇಂಡಿಯನ್ಸ್ ಅಲ್ಲದೆ ಮತ್ತಾರು ಸಿಗಲು ಸಾಧ್ಯ?"

ಅಮೆರಿಕನ್ ಹೇಳಿದ,
"ಕಾಶ್ಮೀರದಲ್ಲಿ ಒಬ್ಬ ಕಾಶ್ಮೀರಿಯನ್ನು ಭೇಟಿ ಮಾಡಿದೆ, ಪಂಜಾಬಿನಲ್ಲಿ ಒಬ್ಬ ಪಂಜಾಬಿಯನ್ನು, ಅದೇ ರೀತಿ
ಬಿಹಾರ,ಮಹಾರಾಷ್ಟ್ರ,ರಾಜಸ್ತಾನ್,ಬಂಗಾಳ,ತಮಿಳುನಾಡು,ಕೇರಳಗಳಲ್ಲಿ
ಬಿಹಾರಿ,ಮರಾಠಿ,ರಾಜಸ್ತಾನಿ,ಬೆಂಗಾಲಿ,ತಮಿಳ,ಮಲಯಾಳಿಗಳನ್ನೂ ಭೇಟಿ ಮಾಡಿದೆ "

ಮತ್ತೆ ಮುಂದುವರೆದು ಹೇಳಿದ
"ಆ ನಂತರ ನಾನು ಒಬ್ಬ ಹಿಂದೂ,ಒಬ್ಬ ಮುಸಲ್ಮಾನ, ಒಬ್ಬ ಕ್ರೈಸ್ತ, ಒಬ್ಬ ಪಾರಸಿ, ಒಬ್ಬ ಜೈನ, ಒಬ್ಬ ಬೌದ್ದ ಹೀಗೆ ಹಲವಾರು ಜನರನ್ನು ಭೇಟಿಯಾದೆ, ಆದರೆ ನನಗೆ "ಇಂಡಿಯದಲ್ಲಿ ಒಬ್ಬನೇ ಒಬ್ಬ ಇಂಡಿಯನ್" ಸಿಗಲಿಲ್ಲ "

ಇದು ಮಿಂಚೆಯಲ್ಲಿ ಬಂದಿತ್ತು .ಇದನ್ನು ಹಾಸ್ಯವೆಂದಾದರು ಪರಿಗಣಿಸಿ, ಇಲ್ಲ ವಿಷಾದ ಅಂತ ಆದರೂ ಪರಿಗಣಿಸಿ, ಆದರೆ ನನಗನ್ನಿಸುವದರ ಮಟ್ಟಿಗೆ ಇದು ನಗ್ನ ಸತ್ಯ.ಪ್ರಾದೇಶಿಕ ಅಸಮಾನತೆಯನ್ನು ಹುಟ್ಟು ಹಾಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಪಕ್ಷ ಹಾಗೂ ರಾಜಕಾರಣಿಗಳಿಂದ ಭಾರತದಲ್ಲಿ ಭಾರತೀಯರೇ ಇಲ್ಲದಂತಾಗುತ್ತಿದ್ದಾರೆ, ಅಲ್ಲವೇ?

ಸಿಗ್ನಲ್ ಸುಂದರಿ

ಕಣ್ಣೆದುರು ನಿಂತ ಕನಸಿನ ಕನ್ಯೆಗೆ
ಕರಾವಳಿಯ ಕಡಲಲೆಯ ಮೇಲೊಂದು
ಕಾವ್ಯ ಸೌಧವ ಕಟ್ಟಿ ನಲ್ಮೆಯ ನೌಕೆಯಲ್ಲಿ ಕೂರಿಸಿ
ಒಲವ ನೀವೆದನೆ ಮಾಡಿ ಅವಳು ಒಪ್ಪಿದರೆ ಎನ್ನ
ಮನದ ಅರಮನೆಗೆ ಅವಳನ್ನೇ ರಾಜಕುಮಾರಿ ಮಾಡಿ
ಪ್ರೇಮ ಪಲ್ಲಕ್ಕಿಯಲ್ಲಿ ಕೂರಿಸಿ ಕಾವೇರಮ್ಮನ ಮಡಿಲಲ್ಲಿ
ಆಗಸದೆತ್ತರದ ಚಪ್ಪರ ಹಾಕಿಸಿ ಸಪ್ತ ಸ್ವರಗಳ ಹಿಮ್ಮೇಳದಲ್ಲಿ
ತುಳುನಾಡ ಮಗನ ಮನೆಗೆ ಮಲೆನಾಡ ಮಗಳ ಕರೆತರಲೇನು
ಎಂದು ಅವಳ ಕೇಳ ಹೋಗಬೇಕೆನ್ನುವಷ್ಟರಲ್ಲಿ
ತೂರಿ ಬಂತೊಂದು ವಾಯ್ಸು
"ಗಾಡಿ ಸೈಡಿಗೆ ಹಾಕ್ರಿ, ಡಿ.ಎಲ್ ತೆಗಿರಿ,
ಏನ್, ಸಿಗ್ನಲ್ನಲ್ಲೆ ಕನಸ್ ಕಾಣ್ತಾ ಇದ್ದೀರಾ!!!!"

- ರಾಕೇಶ್ ಶೆಟ್ಟಿ Smiling

ಬೆಂಕಿ ಬಿತ್ತು ಕಂಪೆನಿಗೆ!!

ಕಂಪೆನಿಗೆ ಬೆಂಕಿ ಬಿದ್ದಾಗ ಏನೆಲ್ಲಾ ಆಗುತ್ತೆ ಅಂತ ಹೇಳೋ ಒಂದು ಮಿಂಚೆ ಬಂದಿತ್ತು.

'ಉಂಡೆನಾಮ' ಕಂಪೆನಿಯಲ್ಲಿ ಎಂದಿನಂತೆ ಉದ್ಯೋಗಿಗಳು ಕೆಲಸದಲ್ಲಿ ತಲ್ಲಿನರಾಗಿರುವಾಗ 'ಫೈರ್ ಅಲಾರಂ' ಆಯ್ತು, ಐದು ಸಾವಿರದಷ್ಟು ಉದ್ಯೋಗಿಗಳು ಕ್ಷಣ ಮಾತ್ರದಲ್ಲಿ ಕಂಪೆನಿಯ ಹೊರಗೋಡಿ ಬಂದು 'ಸೇಫ್ ಜೋನ್' ಅಲ್ಲಿ ನಿಂತರು. ೫ ನಿಮಿಷವಾಯ್ತು , ೧೦ ನಿಮಿಷವಾಯ್ತು... ಕಡೆಗೆ ಎಲ್ಲ ಉದ್ಯೋಗಿಗಳು ಹೊರ ಬಂದ ಮೇಲೆ,

ಸೆಕ್ಯೂರಿಟಿ ಆಫಿಸರ್ ಅನೌನ್ಸ್ ಮಾಡಿದ :
"ಪ್ರೀತಿಯ ಉದ್ಯೋಗಿಗಳೇ ಭಾರವಾದ ಹೃದಯದಿಂದ ನಿಮಗೆ ಒಂದು ವಿಷಯ ಹೇಳಲಿಚ್ಚಿಸುತ್ತೇನೆ, ನಿಮ್ಮಲ್ಲಿ ಹಲವರಿಗೆ ಬಹುಷಃ ಇದೆ ಕಡೆಯ 'ಮಾಕ್ ಫೈರ್ ಡ್ರಿಲ್' ಆಗಿರಬಹುದು.ಕಾರಣ ಮ್ಯಾನೆಜ್ಮೆಂಟ್ನವರು ೮೦% ಉದ್ಯೋಗಿಗಳನ್ನು lay-off ಮಾಡಲು ನಿರ್ಧರಿಸಿದ್ದಾರೆ. ಒಳ ಬರುವಾಗ ಯಾರ ಯಾರ "ಐಡಿ ಕಾರ್ಡ್" ಕೆಲಸ ಮಾಡುವುದಿಲ್ಲವೋ ಅವರನ್ನೆಲ್ಲ ತೆಗೆದು ಹಾಕಲಾಗಿದೆ ಹಾಗು ಅವರ ವಸ್ತುಗಳನ್ನೆಲ್ಲ ಕೊರಿಯರ್ ಮಾಡಲಾಗುತ್ತದೆ!!! "

- ರಾಕೇಶ್ ಶೆಟ್ಟಿ Smiling

ಮಾತಿಗೊಮ್ಮೆ 'ಇಂಡಿಯಾ,ಇಂಡಿಯನ್ಸ್' ಅನ್ನುವ ಮೊದಲು


ಕೆಲವರಿರುತ್ತಾರೆ,ಅವರ ಕೈಯಲ್ಲಿ ಮಾಡಲಾಗದ ಕೆಲಸಕ್ಕೆಲ್ಲ ದೇಶವನ್ನೇ ಬೈಯ್ಯುವವರು, ನನ್ನ ಒಬ್ಬ ಗೆಳೆಯ ಇದ್ದಾನೆ, ಅವನಿಗೆ ಹೇಳಿದ ಟೈಮ್ಗೆ ಬರೋ ಅಭ್ಯಾಸನೆ ಇಲ್ಲ, ಕೇಳಿದ್ರೆ
"ನೋಡಮ್ಮ ,ನಾವ್ ಎಷ್ಟೇ ಆದ್ರೂ 'ಇಂಡಿಯನ್ಸ್' ನಾವ್ ಹಿಂಗೆ ಬರೋದು ಅಂತಾನೆ'.

ಮೊನ್ನೆ ಊಟಕ್ಕೆ ಅಂತ ನಮ್ಮ ಆಫಿಸ್ ಅತ್ರ ಇರೋ 'ನಿಸರ್ಗ' ಅನ್ನೋ ಹೋಟೆಲ್ಗೆ ಹೋದಾಗ, ನಾ ಕುಳಿತಿದ್ದ ಟೇಬಲ್ನಲ್ಲೆ ಇಬ್ಬರು ಮಹಾಶಯರು ಕುಳಿತಿದ್ದರು. ಅವರಲ್ಲೊಬ್ಬ ತನ್ನ ಕುಂಬಳಕಾಯಿಯಂತ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ಹೇಳಿದ,

'ನೀನ್ ಏನೇ ಹೇಳಮ್ಮ ನಮ್ಮ್ ದೇಶದಲ್ಲಿ ಶಾಲೆಯಲ್ಲಿ ಹೆಲ್ತ್ ಬಗ್ಗೆ ಓದಿಸೋದೆ ಇಲ್ಲ ನೋಡು',
ಅದಕ್ಕೆ ಮತ್ತೊಬ್ಬ 'ಹ್ಞೂ ಕಣೋ, ನಮ್ ದೇಶದಲ್ಲಿ ಮಾತ್ರ ಹಿಂಗೆ, ಬೇರೆ ದೇಶದಲ್ಲೆಲ್ಲ ಮಿಲಿಟರಿ ಟ್ರೈನಿಂಗ್ ಕಡ್ಡಾಯ ಮಾಡಿರ್ತಾರೆ, ಹಾಗಾದ್ರೂ ಇದ್ದಿದ್ರೆ ಹೆಂಗೋ ಒಳ್ಳೆ ಬಾಡಿ ಮೈನ್ಟೈನ್ ಮಾಡಬಹುದಿತ್ತು, ಅಲ್ವಾ?'
'ಹೌದು ಗುರು, ಎಷ್ಟಾದ್ರೂ ಇದು ಇಂಡಿಯಾ ಬಿಡು, ಇಲ್ಲಿ ಹಂಗೆಲ್ಲ ಆಗೋಲ್ಲ' ... ಹೀಗೆ ಮುಂದುವರೆದಿತ್ತು ಅವರ ಹರಟೆ.

ಅಲ್ಲ ಸ್ವಾಮೀ, ಆ ಪುಣ್ಯಾತ್ಮನಿಗೆ ಸರಿಯಾದ ಸಮಯಕ್ಕೆ ಬರಲಾಗುವುದಿಲ್ಲವಾದರೆ ಅದನ್ನು ದೇಶದ ಮೇಲೆ ಹೇಳುತ್ತಾನೆ, ಮತ್ತೊಬ್ಬ ಪುಣ್ಯಾತ್ಮ ಫಿಜ್ಜ,ಬರ್ಗರ್ ತಿಂದು ಕೊಬ್ಬು ಬೆಳೆಸಿಕೊಂಡು ಅದನ್ನು ದೇಶದ ತಲೆಗೆ ಕಟ್ಟುತ್ತಾನೆ!! ದೇಶವನ್ನು ಬೈಯ್ಯುವುದು ನಮಗೆ ಕಡ್ಲೆ ಪುರಿ ತಿಂದಷ್ಟೇ ಸುಲಭವಾಗಿ ಬಿಟ್ಟಿದೆ.

ನಾವ್ಯಾಕೆ ಹೀಗೆ ನಮ್ಮ ದೇಶದ ಬಗ್ಗೆಯೇ ನೆಗೆಟೀವ್ ಆಗಿ ಮಾತಾಡ್ತೀವಿ? ನಮಗೆ ಯಾಕೆ ದೇಶದ ಮೇಲೆ ಈ ಪರಿ ಸಿಟ್ಟು? ದೇಶದ ಮೇಲೆ ಇಷ್ಟೆಲ್ಲಾ ಮಾತಾಡುವ ಮೊದಲು,ನಾವೆಷ್ಟು ಸರಿಯಿದ್ದೇವೆ ಅಂತ ನಾವ್ಯಾಕೆ ಕೇಳಿಕೊಳ್ಳುವುದಿಲ್ಲ? ಈ ದೇಶ ಉದ್ದಾರ ಆಗೋಲ್ಲ, ಬದಲಾಗೊಲ್ಲ ಅನ್ನುವುದಕಿಂತ ಮೊದಲು, ನಾವು ಬದಲಾಗಬೇಕು, ನಾವು ಯೋಚಿಸುವ ರೀತಿ ಬದಲಾಗಬೇಕು, ಈ ದೇಶವನ್ನು ಮುನ್ನಡೆಸುತ್ತಿರುವ ನಾಯಕರು ಹಾಗು ಅವರ ಮನಸ್ತಿತಿ ಬದಲಾಗಬೇಕು.

ಇನ್ನೊಮ್ಮೆ 'ಇಂಡಿಯಾ,ಇಂಡಿಯನ್ಸ್' ಅನ್ನುವ ಮೊದಲು , ನಾವೆಷ್ಟು ಸರಿಯಿದ್ದೇವೆ ಅಂದು ಕೇಳಿಕೊಳ್ಳೋಣವೇ?

(ಚಿತ್ರ ಕೃಪೆ :http://www.goodcommitment.tv)

ರಾಕೇಶ್ ಶೆಟ್ಟಿ Smiling

ಭಾರತ - ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಸಮರ ನಡೆದರೆ?

ಹೌದು ನಡೆದರೆ ಏನಾಗುತ್ತೆ? ಅಂತ ವಿಡಂಬನಾತ್ಮಕವಾಗಿ ವಿವರಿಸುವ ಮಿಂಚೆಯೊಂದು ಬಂದಿತ್ತು,

'ಶೀತಲ ಸಮರ'ದ ಸಮಯದಲ್ಲಿ ಅಮೆರಿಕಾವೆನಾದ್ರು ರಷ್ಯಾದ ಮೇಲೆ ಅಣ್ವಸ್ತ್ರ ಸಿಡಿತಲೆ ಪ್ರಯೋಗಿಸಿದ್ದರೆ, ರಷ್ಯಾಕ್ಕೆ ಅದು ೩ ಸೆಕೆಂಡ್ಗಳಲ್ಲಿ ತಿಳಿಯುತ್ತಿತ್ತು ಮತ್ತು ಅದಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಲು ಕೇವಲ ೪೫ ಸೆಕೆಂಡ್ಗಳು ಸಾಕಿತ್ತು.

ಮುಂಬೈ ಮಾರಣ ಹೋಮದ ನಂತರ ಭಾರತ - ಪಾಕಿಸ್ತಾನದ ನಡುವೆ ಯುದ್ದ ಭೀತಿ ಶುರುವಾಗಿದೆಯಲ್ಲ (!), ಯುದ್ಧ ನಡೆದರೆ ಹೀಗಾಗಬಹುದು!!

ಪಾಕಿ ಸೈನ್ಯ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ತೀರ್ಮಾನಿಸುತ್ತದೆ, ಹಾಗೂ ಪ್ರಯೋಗಿಸಿಯೂ ಬಿಡುತ್ತದೆ.(ನೆನಪಿರಲಿ, ಹಾಗೆ ಮಾಡಲು ಅದಕ್ಕೆ ಸರ್ಕಾರದ ಆಜ್ಞೆಗೆ ಕಾಯುವ ಅಗತ್ಯ ಇಲ್ಲ)

ಭಾರತದ ಟೆಕ್ನಾಲಜಿ ಚೆನ್ನಾಗಿರುವುದರಿಂದ ಕೇವಲ ೮ ಸೆಕೆಂಡ್ ಗಳಲ್ಲೇ ಅದಕ್ಕೆ ವಿಷಯ ತಿಳಿದು ಹೋಗುತ್ತದೆ, ಪ್ರತಿ ಅಸ್ತ್ರ ಪ್ರಯೋಗಿಸಲು ಭಾರತಿಯ ಸೈನ್ಯ ನಿರ್ಧಾರ ಮಾಡುತ್ತದೆ.ಆದರೆ ಅವರಿಗೆ ಹಾಗೆ ಮಾಡಲು ಸರ್ಕಾರದ ಆಜ್ಞೆ ಬೇಕಲ್ಲಾ!!

ಸೈನ್ಯವು 'ರಾಷ್ಟ್ರಪತಿ'ಯವರಿಗೆ ಈ ಬಗ್ಗೆ ಪತ್ರವೊಂದನ್ನು ಕಳಿಸುತ್ತದೆ, ಅವರು ಅದನ್ನು 'ಕ್ಯಾಬಿನೆಟ್'ನ ಮುಂದಿಡುತ್ತಾರೆ.ಪ್ರಧಾನಿ ತುರ್ತು ಲೋಕ ಸಭೆ ಅಧಿವೇಶನ ಕರೆಯುತ್ತಾರೆ. ಆದರೆ ಗೊತ್ತಲ್ಲ, ನಮ್ಮ ರಾಜಕೀಯ ನಾಯಕರು 'ಸಭಾತ್ಯಾಗ' ಹಾಗೂ 'ಗದ್ದಲವೆಬ್ಬಿಸುತ್ತಾರೆ'. ಲೋಕ ಸಭೆಯ ಅಧಿವೇಶನ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಡುತ್ತದೆ.
ರಾಷ್ಟ್ರಪತಿಯವರು ತುರ್ತು ನಿರ್ಣಯ ಕೈಗೊಳ್ಳುವಂತೆ ಆದೇಶಿಸುತ್ತಾರೆ.

ಅತ್ತ ಪಾಕಿಗಳು ಹಾರಿಸಿದ ಮಿಸೈಲ್ ತಾಂತ್ರಿಕ ಕಾರಣದಿಂದ ಫೇಲ್ ಆಗಿ ಅವರು ಮತ್ತೊಮ್ಮೆ ಹಾರಿಸುವ ಯತ್ನದಲ್ಲಿರುತ್ತಾರೆ.

ಇತ್ತ ಭಾರತದಲ್ಲಿ ಕೇಂದ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ಕೊಟ್ಟಿದ್ದ ಪಕ್ಷವೊಂದು ಬೆಂಬಲ ಹಿಂತೆಗೆದುಕೊಂಡು ಸರ್ಕಾರ ಬಿದ್ದು ಹಂಗಾಮಿ ಸರ್ಕಾರವೊಂದು ನಿರ್ಮಾಣವಾಗುತ್ತದೆ.ಹಂಗಾಮಿ ಪ್ರಧಾನಿಯವರು ಅಣ್ವಸ್ತ್ರ ಪ್ರಯೋಗಿಸಲು ಭದ್ರತಾ ಪಡೆಗಳಿಗೆ ಅನುಮತಿ ನೀಡುತ್ತಾರೆ.ಆದರೆ ಎಲೆಕ್ಷನ್ ಕಮಿಷನ್ ಹಂಗಾಮಿ ಸರ್ಕಾರ ಚುನಾವಣ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದೆ ಎಂದು ಸರ್ವೋಚ್ಹ ನ್ಯಾಯಾಲಯದ ಮೆಟ್ಟಿಲೇರುತ್ತದೆ. ನ್ಯಾಯಾಲಯ ಸರ್ಕಾರದ ಪರ ತೀರ್ಪು ನೀಡುತ್ತದೆ.

ಅಷ್ಟರಲ್ಲಿ ಪಾಕಿಗಳು ಒಂದು ಮಿಸೈಲ್ ಹಾರಿಸಿಯೇ ಬಿಡುತ್ತಾರೆ, ಆದರೆ ಅದು ಇಸ್ಲಾಮಾಬಾದ್ನಲ್ಲೆ ಸರ್ಕಾರಿ ಕಟ್ಟಡದ ಮೇಲೆ ಬೀಳುತ್ತದೆ Eye-wink

ಆದರೆ ಹಠ ಬಿಡದ ಪಾಕಿಗಳು ಮತ್ತೆ ಮತ್ತೆ ಪ್ರಯತ್ನಿಸಿ ವಿಫಲರಾಗಿ ಈ ಬಾರಿ 'Made in China' ಮಿಸೈಲ್ನ ಹಣೆ ಬರಹವೇ ಇಷ್ಟು ಎಂದು, ಅದನ್ನು ಬಿಟ್ಟು 'Made in USA' ಮಿಸೈಲ್ ಬಳಸಲು ತೀರ್ಮಾನಿಸುತ್ತಾರೆ.

ಇತ್ತ ಭಾರತದ ಸೇನೆ ಸರ್ಕಾರದ ಆಜ್ಞೆಗೆ ಕಾದ ೩ ತಿಂಗಳ ಬಳಿಕ, ಸರ್ಕಾರದ ಆದೇಶದ ಮೇರೆಗೆ ಸ್ವ-ನಿರ್ಮಿತ ಮಿಸೈಲ್ ಅನ್ನು ಹಾರಿಸಲು ನಿರ್ಧರಿಸುತ್ತದೆ. ಅಷ್ಟರಲ್ಲಿ ದೇಶಾದ್ಯಂತ ಅಣ್ವಸ್ತ್ರ ಪ್ರಯೋಗದ ವಿರುದ್ದ ಪ್ರತಿಭಟನೆ ನಡೆಯುತ್ತದೆ.

ಈ ನಡುವೆ ಪಾಕಿಗಳು 'ಕಳ್ಳ ಸಾಗಣೆ'ಯಲ್ಲಿ ತಂದ 'Made in USA' ಮಿಸೈಲ್ ಅನ್ನು ಪ್ರಯೋಗಿಸಲು ಹೊರಡುತ್ತಾರೆ, ಅವರಿಗೆ ಅಮೇರಿಕಾದವರು ಬರೆದ ಸಾಫ್ಟವೇರ್ ಅರ್ಥವಾಗುವುದಿಲ್ಲವಾದರು ಹಾರಿಸಿಯೇ ಬಿಡುತ್ತಾರೆ, ಆದರೆ ಆ ಮಿಸೈಲ್ ಭಾರತ ಕಡೆ ನುಗ್ಗುವುದು ಬಿಟ್ಟು ಅದರ ನಿಜವಾದ ಗುರಿಯ ಕಡೆ ನುಗ್ಗುತ್ತದೆ Eye-wink

ಗುರಿ : ರಷ್ಯಾ !!!

ರಷ್ಯಾ, ಪಾಕಿಗಳು ಹಾರಿಸಿದ ಮಿಸೈಲ್ ಅನ್ನು ಕ್ಷಣಾರ್ದದಲ್ಲಿ ಹೊಡೆದುರುಳಿಸಿ, ಪ್ರತಿಯಾಗಿ ತಾವು ಮಿಸೈಲ್ ಹಾರಿಸುತ್ತಾರೆ. ಪಾಕಿಸ್ತಾನ ದ್ವಂಸವಾಗಿ, ಸಹಾಯಕ್ಕಾಗಿ ವಿಶ್ವದ ಮೊರೆಯಿಡುತ್ತದೆ.

ತಕ್ಷಣ ಎಚ್ಚೆತ್ತ ಭಾರತ ಪಾಕಿಗಳಿಗೆ ಕಂಬನಿ ಮಿಡಿದು, ಮಿಲಿಯನ್ ಡಾಲರ್ನಷ್ಟು ಪಾರ್ಲೆ-ಜಿ ಬಿಸ್ಕೆಟ್ಗಳನ್ನೂ ಕಳಿಸಿಕೊಡುತ್ತದೆ.

ಹಾಗೆ ಭಾರತ ಅಣ್ವಸ್ತ್ರವನ್ನು ಬಳಸದೆ ಶಾಂತಿಯಿಂದಲೇ ಯುದ್ಧವನ್ನು ಗೆದ್ದು ಬಿಡುತ್ತದೆ!!!

- ರಾಕೇಶ್ ಶೆಟ್ಟಿ Smiling

Monday, March 23, 2009

ಈ ದಿನದ ವಿಶೇಷ ಗೊತ್ತ - ೨ ?



ಇಂದಿಗೆ ಆ ಮಹಾನ್ ಚೇತನಗಳು ಆತ್ಮಾರ್ಪಣೆ ಮಾಡಿ ೭೮ ವರ್ಷಗಳಾಯಿತು. 'ಭಗತ್ ಸಿಂಗ್, ಸುಖ್ ದೇವ್,ರಾಜ್ ಗುರು' ಎಂಬ ೩ ಯುವಕರು, ನಿಜವಾದ ಕ್ರಾಂತಿಕಾರಿಗಳು ಎಂದರೆ ಕೇವಲ ಆವೇಶದಲ್ಲಿ ಶಸ್ತ್ರ ಹಿಡಿದವರಲ್ಲ ಎಂದು ತೋರಿಸಿ, ದೇಶದ ಪ್ರತಿಯೊಬ್ಬರಲ್ಲು 'ಸ್ವಾತಂತ್ಯ್ರದ ಕಿಡಿ'ಯನ್ನು ಹೊತ್ತಿಸಿದರು.


मरके कैसे जीते है
इस दुनिया को बतलाने
तेरे लाल चले है माहे
अब तेरे लाज बचा ने ||

ಮೇಲಿನ ಈ ೪ ಸಾಲುಗಳಲ್ಲೇ ಅವರ ನಿರ್ಧಾರ ಎಷ್ಟು ಅಚಲವಾಗಿತ್ತು ಎಂಬುದು ತಿಳಿಯುತ್ತದೆ.೨೦ ರ ಆಸುಪಾಸಿನಲ್ಲೇ 'ಸರ್ವ ಧರ್ಮ ಸಮನ್ವಯ' ದ ಕನಸು ಕಂಡ, ಸ್ವತಂತ್ರ ಭಾರತ ಹೇಗಿರಬೇಕು ಎಂಬ ದೂರದೃಷ್ಟಿಯಿದ್ದ ಭಗತ ಸಿಂಗ್ ರಂತವರು ಎಂದಿಗೂ ಜನಮಾನಸದಲ್ಲಿ ಅಮರಾಗಿರುತ್ತಾರೆ.

ಇಂಕ್ವಿಲಾಬ್ ಜಿನ್ದಾಬಾದ್

(ಚಿತ್ರ ಕೃಪೆ :midhun.allubrothers.com)

Saturday, February 14, 2009

ಫೆಬ್ರವರಿ 14 : ಅದ್ಯರಾ ದಿನವೋ?

ಮೂರು options ಇದೆ, ಯಾವುದು ಒಳ್ಳೇದು ಅನ್ನಿಸುತ್ತೋ ಅದೇ ತಗೊಳ್ಳಿ.

೧.'ಪಬ್ ಭರೋ' ಚಳುವಳಿ

೨.'ಸಾಮೂಹಿಕ ಪ್ರೇಮಿಗಳ ದಿನಾಚರಣೆ'

೩.'ರಾಖಿ ಕಟ್ಟಿ ಇಲ್ಲ ತಾಳಿ ಕಟ್ಟಿ'

ಬಹುಷಃ ನಮ್ಮ ಸ್ವಾತಂತ್ರದ ಸುವರ್ಣ ಮಹೋತ್ಸವಕ್ಕೂ ಯಾರು ಇಷ್ಟೊಂದು ತಲೆ ಕೆಡಿಸಿಕೊಂಡು ಕಾರ್ಯಕ್ರಮಗಳನ್ನ ರೂಪಿಸಿರಲಿಲ್ಲ ಅನ್ನಿಸುತ್ತೆ.ಈ ಮೇಲಿನ ಮೂರು ಆಪ್ಶನ್ಗಳು ಪ್ರೇಮಿಗಳ ದಿನಕ್ಕಾಗಿ. ಬೆಂಗಳೂರಿನ ಮಟ್ಟಿಗೆ ಹೇಳುವದಾದರೆ ಈ ಎಲ್ಲ ಮಹಾನ್ ಚಳುವಳಿಗಳು 'ಮಹಾತ್ಮ ಗಾಂಧೀ' ರಸ್ತೆಯಲ್ಲೇ ನಡೆಯಬಹುದು ಅನ್ನಿಸುತ್ತೆ.

ಮೊದಲಿಗೆ ಮಾನ್ಯ ಮಹಿಳಾ ಕಲ್ಯಾಣ (?) ಸಚಿವೆ ರೇಣುಕಮ್ಮ ಪ್ರಾಯೋಜಿತ 'ಪಬ್ ಭರೋ' ಚಳುವಳಿಯಲ್ಲಿ ತೇಲಾಡಿಕೊಂಡು "ಕುಡಿಯೋದೆ ನನ್ನ ವೀಕ್ನೆಸ್ಸು" ಅಂತಾ ಹಾಡ್ಕೊಂಡು ಪಬ್ಬಿನ ಮಬ್ಬಿನಿಂದ ಹೊರ ಬಂದು ಪ್ರಗತಿಪರರಿಂದ ಒಂದು ಉಚಿತ 'ಕೆಂಪುಗುಲಾಬಿ' ಪಡೆದು "ಈ ಗುಲಾಬಿ ಹೂ ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ" ಅಂತ ಹಾಡ್ತಾ ಯಾವುದಾದರು ಹುಡುಗಿಯ ಜೊತೆ ಪಾರ್ಕಿಗೋ ಅಥವಾ ಇನ್ನೆಲೋ ಹೊರಟರೆ, ಅಲ್ಲಿಗೆ ಶ್ರೀರಾಮ ಸೇನೆಯವರು ಎಂಟ್ರಿ ಹಾಕಿ "ಸಪ್ತ ಪದಿ, ಇದು ಸಪ್ತ ಪದಿ" ಅಥವಾ "ಅಣ್ಣ ತಂಗಿಯರ ಈ ಬಂಧ" ಅಂತ ಹಾಡಿಸ್ತಾರೆ.

ಈ ಎಲ್ಲ ಮಹಾನ್ ಹೋರಾಟಗಳ ನಡುವೆ ಇನ್ನು ಕೆಲವರು ರಾಮಸೆನೆಯವರಿಗೆ ಕೊಡಲು 'ಪಿಂಕ್ ಚಡ್ಡಿ' ಸಂಗ್ರಹಿಸುತಿದ್ದಾರೆ.ಅದಕ್ಕೋಸ್ಕರವೇ ಒಂದು ಪ್ರತ್ಯೇಕ ಬ್ಲಾಗ್ ಸಹ ಶುರು ಮಾಡಿದ್ದಾರೆ.ಒಂದು ವಿಕೃತಿಯನ್ನು ವಿರೋಧಿಸಲು ಎಷ್ಟೆಲ್ಲ ವಿಕೃತಿಗಳು.

ಇವಿಷ್ಟು ಅನಾಹುತವನ್ನು ತನ್ನ ನಾಮಧೇಯದ ರಸ್ತೆಯಲ್ಲೇ ನೋಡುವ ಮಹಾತ್ಮ 'ಒಹ್! ನನ್ನ ಸ್ವತಂತ್ರ ಭಾರತವೇ' ಅಂತ ಕಂಬನಿ ಮಿಡಿಯುವುದಿಲ್ಲವೆ?

Friday, January 23, 2009

ಈ ದಿನದ ವಿಶೇಷ ನಿಮಗೆ ಗೊತ್ತಾ!?


ನೀವು ಯಾರನ್ನಾದರೂ ಒಮ್ಮೆ ಕೇಳಿ ನೋಡಿ 'ಅಕ್ಟೋಬರ್ ೨ ಹಾಗೂ ನವೆಂಬರ್ ೧೪ರ ವಿಶೇಷ ಏನು?' ಅಂತ.ಬಹುಷಃ ಎಲ್ಲರೂ ವಿಶೇಷವೇನು ಅಂತ ಹೇಳುತ್ತಾರೆ. ಅವರಿಗೆ ಜನವರಿ ೨೩ರ ವಿಶೇಷವೇನು ಎಂದು ಕೇಳಿ ನೋಡಿ.. ಗೊತ್ತಿಲ್ಲ ಸರ್ ಅನ್ನುವುವರ ಸಂಖ್ಯೆಯೇ ಹೆಚ್ಚು.ಇವತ್ತಿನ ದಿನದ ವಿಶೇಷ ನಿಮಗೆ ಗೊತ್ತ ಅಂತ ಕೇಳಿಕೊಳ್ಳಿ? ಗೊತ್ತಿಲ್ಲದಿದ್ದರೂ ತಪ್ಪು ನಿಮ್ಮದಲ್ಲ ಬಿಡಿ.ನಾವು ಓದಿರುವ ಇತಿಹಾಸ ಹಾಗೂ ನಮ್ಮ ಸರ್ಕಾರಗಳದ್ದು.

ಈ ದಿನದ ವಿಶೇಷವೆಂದರೆ ೧೧೨ ವರ್ಷಗಳ ಹಿಂದೆ ಅಂದರೆ ೧೮೯೭ರ ಜನವರಿ ೨೩ ರಂದು ಭಾರತದ ಸ್ವಾತಂತ್ಯ್ರ ಹೋರಾಟದ 'ಸಮರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್' ಅವರ ಜನ್ಮ ದಿನ.

ಸುಭಾಷರ ಬಗ್ಗೆ ಬರೆಯಲು ಬಹಳಷ್ಟಿದೆ.ಅವರ ಜೀವನವೇ ಒಂದು ರೋಚಕ ಕತೆಯ ತರ, ಆದರೆ ಆ ರೋಚಕತೆಗೆ ಒಂದು ನಿಗೂಢ ಹಾಗೂ ದುರಂತ ಅಂತ್ಯವಿದೆ. ಇದರ ಬಗ್ಗೆ ಮುಂದೆ ಯಾವಾಗಲಾದರು ಬರೆಯುತ್ತೇನೆ.

ಸದ್ಯಕ್ಕೆ, ಇವತ್ತಿನ ದಿನದ ವಿಶೇಷವನ್ನ ನಿಮ್ಮ ಸ್ನೇಹಿತರಿಗೆ,ಮಕ್ಕಳಿಗೆ ತಿಳಿಸಿದರೆ ಆ ಮಹಾ ಚೇತನಕ್ಕೆ ಗೌರವ ಸೂಚಿಸಿದಂತಾಗುತ್ತದೆಯಲ್ಲವೇ?

ಚಿತ್ರ ಕೃಪೆ :ನೇತಾಜಿ.ನೆಟ್ ಫಾರ್ಮ್ಸ್.ಕಾಂ

Saturday, January 17, 2009

ಮುಂಗಾರು ಮಳೆ ಬಂದ ಮೇಲೆ ಕ್ವಾಲಿಟಿ ಬಂತಾ???

ಮಧ್ಯಾನ್ಹದ ಊಟ ಮುಗಿಸಿ ಸಹುದ್ಯೋಗಿಗಳೊಂದಿಗೆ ಸೇರಿ ಒಂದು ರೌಂಡ್ಸ್ ಹೋಗೋ ಅಭ್ಯಾಸ ಇದೆ.ನಿನ್ನೆ ಹಾಗೆ ಹೋಗುವಾಗ, ಗೆಳೆಯ ಕಾರ್ತಿಕ್ ಹೇಳಿದ್ರು 'ಬೆಳಿಗ್ಗೆ ಎದ್ದ ತಕ್ಷಣ ನಾನು ರೇಡಿಯೋ ಕೇಳೋ ಅಭ್ಯಾಸ ಮಾಡ್ಕೊಂಡಿದ್ದೀನಿ'. ಓಹೋ,ಇದೇನೋ ಹೊಸ ಅಭ್ಯಾಸ ಅಂತ ಸವಿತ ಕೇಳಿದ್ರು.

ಅದಕ್ಕೆ, ನಾನು ಈಗ ಕೆಲವು FM ಗಳಲ್ಲಿ ಕನ್ನಡ ಹಾಡು ಮಾತ್ರ ಹಾಕ್ತಾ ಇದ್ದಾರೆ ಅಲ್ವಾ ಅಂದೆ, ಅದಕ್ಕೆ ಕಾರ್ತಿಕ್ ಹೌದು ಹೌದು , ಇತ್ತೀಚಿಗೆ ಕನ್ನಡದ ಹಾಡುಗಳು ಚೆನ್ನಾಗಿ ಬರುತ್ತಿವೆ ಅಂದ್ರು!

ನಾನು ಸವಿತ ಇಬ್ಬರು ಒಟ್ಟಿಗೆ "ಅಂದ್ರೆ ಏನಪ್ಪಾ ಮೊದಲೆಲ್ಲ ಚೆನ್ನಗಿರಲಿಲ್ವಾ?" ಅಂದ್ವು.
ಅವರು " ಇಲ್ಲ ಇಲ್ಲ 'ಮುಂಗಾರು ಮಳೆ' ಬಂದ ಮೇಲೆ ಕನ್ನಡದಲ್ಲಿ ಹಾಡುಗಳು ಚೆನ್ನಾಗಿ ಬರ್ತಾ ಇದೆ" ಅನ್ನೋದಾ?

ಅಲ್ಲ ಗುರುವೇ, ನಿನಗೆ ಹಳೆ ಕನ್ನಡ ಚಿತ್ರ ಗೀತೆಗಳ ಬಗ್ಗೆ ಗೊತ್ತಾ? ಕೇಳಿದ್ದಿಯಾ? ಅಂದ್ರೆ,ಪುಣ್ಯಾತ್ಮ ಕಾರ್ತಿಕ್ ಅವರದೇ ಧಾಟಿಯಲ್ಲಿ ಹೇಳುತ್ತಾ ಹೋದರು,
'ಸೋನು ,ಶ್ರೇಯ,ಸುನಿಧಿ,ಗಾಂಜಾವಾಲ' ಎಲ್ಲ ಈಗ ಕನ್ನಡದಲ್ಲಿ ಹಾಡ್ತಾ ಇರೋದ್ರಿಂದ ಕ್ವಾಲಿಟಿ ಚೆನ್ನಾಗಿದೆ.

ಸವಿತ ಏನೇ ಹೇಳಿದರು, ಕಾರ್ತಿಕ್ಗೆ ಅವರು ಹೇಳಿದ್ದೆ ಸರಿ ಅನ್ನುವಂತೆ ಅಸಂಬದ್ಧವಾಗಿ ವಾದ ಮಾಡುತ್ತಲೇ ಹೋದರು. ಅಂದ ಹಾಗೆ ಈ ಕಾರ್ತಿಕ್ ಕನ್ನಡದವರಲ್ಲ, ತೆಲುಗಿನವರು. ಆದ್ರೆ ಕನ್ನಡ ಮಾತನಾಡುತ್ತಾರೆ,ಕನ್ನಡ ಸಿನಿಮಾ ನೋಡ್ತಾರೆ.

ಅವರು ಹೇಳಿದ ಮಾತಿನಿಂದ ನನಗೆ ಎರಡು ವಿಷಯಗಳು ತಲೆಯಲ್ಲಿ ಹರಿಯಲಾರಂಭಿಸಿತು.
೧. ಯಾವುದೇ ವಿಷಯದ ಅರಿವು ಇಲ್ಲದೆ, ಟೀಕೆ- ಟಿಪ್ಪಣಿ ಮಾಡುತ್ತಾ, ಸ್ವಲ್ಪ ಜ್ಞಾನವು ಇಲ್ಲದೆ ತೀರ್ಪನ್ನು ಕೊಟ್ಟು ಬಿಡುವ ಅವಿವೇಕಿಗಳ ಬಗ್ಗೆ.
೨. ಇತ್ತೀಚಿಗೆ ಕನ್ನಡ ಚಿತ್ರಗಳಲ್ಲಿ ಅತಿಯಾಗಿ ಬಾಲಿವುಡ್ನ ಗಾಯಕ ಗಾಯಕಿಯರಿಗೆ ಮಣೆ ಹಾಕಲಾಗುತ್ತಿದೆಯೇ ಎಂಬ ಬಗ್ಗೆ ?

ಆದರೆ, ಇವೆರಡರಲ್ಲಿ ಮೊದಲನೆ ವಿಷಯ ಸ್ವಲ್ಪ ವಿಚಾರ ಮಾಡಬೇಕಾದದ್ದು, ಅದೇನಿದ್ದರೂ ವಿಚಾರವಾದಿಗಳಿಗೆ, ಬುದ್ದಿಜೀವಿ(?)ಗಳಿಗೆ ಇರಲಿ ಅಂತ ಬಿಟ್ಟು,ಎರಡನೇ ವಿಷಯದ ಬಗ್ಗೆ ಬರೆಯುತಿದ್ದೇನೆ.

ಹೌದು, ಇಲ್ಲ ಅಂದ್ರು ಇತ್ತೀಚಿಗೆ ಕನ್ನಡ ಚಿತ್ರಗಳಲ್ಲಿ ಅತಿ ಎನಿಸುವಷ್ಟು ಬಾಲಿವುಡ್ ಗಾಯಕ ಗಾಯಕಿಯರಿಗೆ ಮಣೆ ಹಾಕಲಾಗುತ್ತಿದೆ. ಖಂಡಿತ ಅವರ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಶ್ರೇಯ ಹಾಡುವ ಶೈಲಿ ಇದೆಯಲ್ಲ, ಅವಳು ಒಂದೊಂದೇ ಶಬ್ದವನ್ನು ಅಪ್ಪಟ ಕನ್ನಡತಿಯಂತೆ ಉಚ್ಚಾರಿಸುತ್ತಾಳೆ, ಸೋನು ಹಾಡಿನಲ್ಲೇ ಕಿಕ್ ಬರಿಸುತ್ತಾನೆ ಅವರೆಲ್ಲ ಪ್ರತಿಭಾವಂತರೆ ಆ ಬಗ್ಗೆ ಎರಡು ಮಾತಿಲ್ಲ.

ಕನ್ನಡ ಚಿತ್ರ ರಂಗದಲ್ಲಿ ಇದು ಹೆಚ್ಚಾಗಿ ಆಗುತ್ತಿದೆ, ಹೀಗೆ ಸ್ವಲ್ಪ ದಿನದ ಹಿಂದೆ ಕನ್ನಡ ಗಾಯಕ ಗಾಯಕಿಯರು , ನಿರ್ಮಾಪಕರ ಈ ನೀತಿಯನ್ನು ವೀರೋಧಿಸಿದ್ದರು, ಆಗ ಒಬ್ಬ ಸಂಗೀತ ನಿರ್ದೇಶಕರು 'ಇಲ್ಲಪ್ಪ, ಆಗಕ್ಕಿಲ್ಲ ಆ ಸೋನು , ಶ್ರೇಯ ಇಲ್ಲ ಅಂದ್ರೆ ನಂಗೆ ಮ್ಯೂಸಿಕ್ ಮಾಡಕ್ಕೆ ಆಗಕಿಲ್ಲ" ಅಂದ್ರು ಅಂತ ಪೇಪರ್ನಲ್ಲಿ ಓದಿದ ನೆನಪು. ಪಾಪ Sad ಅವರಿಗೆ ಆ ಗಾಯಕರ ಮೇಲೆ ಇರುವಷ್ಟು ನಂಬಿಕೆ ಅವರ ಸಂಗೀತದ ಮೇಲೆ ಇಲ್ಲ ಅನ್ನಿಸುತ್ತೆ!

ಈ ಮಾತು ಹೇಳುವಾಗ ಎಲ್ಲರೂ ಒಂದು ಮಾತು ಹೇಳುತ್ತಾರೆ "ಸಂಗೀತಕ್ಕೆ ಯಾವುದೇ ಭಾಷೆಯಿಲ್ಲ, ಕಲಾವಿದರಿಗೆ ಭಾಷೆಯ ಪರಿಧಿಯಿಲ್ಲ" ಅಂತ, ನಿಜ ನಿಜ ಒಪ್ಪುವಂತದ್ದೆ.

ನಮ್ಮ ನಿರ್ಮಾಪಕರ ತಲೆಯಲ್ಲಿ ಅದ್ಯಾವ ದೈವ ವಾಣಿ ಆಗಿದೆಯೋ ತಿಳಿಯದು, ಬಹಳಷ್ಟು ನಿರ್ಮಾಪಕರಿಗೆ ಸಂದರ್ಶನದಲ್ಲಿ "ಕನ್ನಡ ಗಾಯಕರನ್ನು ಏಕೆ ಬಳಸಿಲ್ಲ?" ಅಂತ ಕೇಳಿದರೆ, "ಬಾಲಿವುಡ್ ಗಾಯಕ/ಗಾಯಕಿಯರ ಹೆಸರಿದ್ದರೆ ಜನ ಹಾಡು ಜಾಸ್ತಿ ಕೇಳ್ತಾರೆ" ಅಂತಾರೆ.
ಅಂದ್ರೆ ಏನರ್ಥ ಸ್ವಾಮಿ ಸಂಗೀತ, ಸಾಹಿತ್ಯ ಹೇಗಿದ್ರು ಪರವಾಗಿಲ್ಲ, ಅವರು ಹಾಡಿಬಿಟ್ಟರೆ ಅದು ಚೆನ್ನಾಗಿ ಆಗುತ್ತೆ ಅಂತಾನಾ? ಅಬ್ಬಾ!

'ಉಪ್ಪಿನಕಾಯಿಯನ್ನು ಊಟದ ಜೊತೆಗೆ ತಿಂದರೆ ಚಂದ, ಆದರೆ ಚೆನ್ನಾಗಿದೆ ಅಂತ, ಉಪ್ಪಿನಕಾಯಿಯನ್ನೇ ಊಟ ಎಂದು ತಿನ್ನಲಾಗುತ್ತದೆಯೇ?'

ನನಗೆ ಅನ್ನಿಸೋದು ಅವರನ್ನು ಬಳಸಿಕೊಳ್ಳೋದು ತಪ್ಪಲ್ಲ, ಆದರೆ ನಮ್ಮಲ್ಲೇ ಪ್ರತಿಭೆಗಳಿರುವಾಗ ಅವರನ್ನು ಸ್ವಲ್ಪ ಕಡಿಮೆಯಾಗಿ, ಬೇಕು ಎನಿಸುವಂತ ಹಾಡುಗಳಿಗೆ ಮಾತ್ರ ಕರೆಸಬಹುದಲ್ವಾ?

ನಿಮಗೆ ಈ ರೀತಿ ಅನ್ನಿಸುವುದಿಲ್ಲವೇ?

-- ರಾಕೇಶ್ ಶೆಟ್ಟಿ Smiling

ಭಾರತಾಂಬೆಯ ವೀರ ಪುತ್ರರಿವರು, ಮುಂಬೈ ಮಾರಣಹೋಮದ ಹುತಾತ್ಮರಿವರು

ಮುಂಬೈ ಮಾರಣ ಹೋಮದಲ್ಲಿ , ನಮ್ಮ ನಾಳೆಗಳಿಗಾಗಿ, ತಾಯ್ನೆಲದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರ ಹೆಸರಿದು. ಮಿಂಚಂಚೆಯಲ್ಲಿ ಬಂದಿದ್ದು. ನನಗೆ ಸಿಕ್ಕ ಮಾಚಿತಿಯಿಷ್ಟು, ಇನ್ನು ಯಾವುದಾದರು ಹೆಸರಿದ್ದರೆ ದಯವಿಟ್ಟು ಇಲ್ಲಿ ಸೇರಿಸಿ

ಭಾರತಾಂಬೆಯ ಈ ವೀರ ಪುತ್ರರು ಅಮರರಾಗಲಿ .

ಕಾನ್ಸ್ ಟೇಬಲ್ - ಜಯವಂತ್ ಪಾಟೀಲ್
ಕಾನ್ಸ್ ಟೇಬಲ್ - ಯೋಗೇಶ್ ಪಾಟೀಲ್
ಕಾನ್ಸ್ ಟೇಬಲ್ - ಅಮ್ಬದಾಸ್ ಪವಾರ್
ಕಾನ್ಸ್ ಟೇಬಲ್ - ಎ .ಆರ್ ಚಿಟ್ಟೆ
ಕಾನ್ಸ್ ಟೇಬಲ್ - ವಿಜಯ್ ಖಂಡೇಕರ್
ರೈಲ್ವೆ ಪೋಲಿಸ್ - ಎಂ.ಸಿ .ಚೌದರಿ
N.S.G ಕಮಾಂಡೋ - ಗಜೆಂದರ್ ಸಿಂಗ್
ಇನ್ಸ್ಪೆಕ್ಟರ್ - ಶಶಾಂಕ್ ಶಿಂದೆ
Asst. ಸಬ್ ಇನ್ಸ್ಪೆಕ್ಟರ್ - ವಿ.ಒಬಲೇ
ಸಬ್ ಇನ್ಸ್ಪೆಕ್ಟರ್ - ಪ್ರಕಾಶ್ ಮೊರೆ
ಸಬ್ ಇನ್ಸ್ಪೆಕ್ಟರ್ - ಬಾಬುಸಾಹೇಬ್ ದುರ್ಗುಡೆ
ಸಬ್ ಇನ್ಸ್ಪೆಕ್ಟರ್ - ನಾನಸಹೇಬ್ ಭೋಸ್ಲೆ
ಸಬ್ ಇನ್ಸ್ಪೆಕ್ಟರ್ - ತುಕಾರಾಂ ಓಂಭ್ಲೆ
ಮೇಜರ್ - ಸಂದೀಪ್ ಉನ್ನಿ ಕೃಷ್ಣನ್
ಹೆಚ್ಚುವರಿ ಪೋಲಿಸ್ ಕಮೀಷನರ್ - ಅಶೋಕ್ ಕಾಮ್ಟೆ
ಸೀನಿಯರ್ ಪೋಲಿಸ್ ಇನ್ಸ್ಪೆಕ್ಟರ್ - ವಿಜಯ್ ಸಾಲಸ್ಕರ್
ATS ಮುಖ್ಯಸ್ತ - ಹೇಮಂತ್ ಕರ್ಕರೆ

ಜೈ ಹಿಂದ್

ಅವರು ಸಾವನ್ನೇ ಕೂಗಿ ಕರೆದರು!!

ಯಾರು ತಮ್ಮ ಸಾವನ್ನು ತಾವೇ ಹುಡುಕಿ ಹೋಗುತ್ತಾರೆ? ಆದರೆ ಕಳೆದವಾರ ಮುಂಬೈ ಮಾರಣ ಹೋಮದಲ್ಲಿ ಸಾವನ್ನು ಹುಡುಕಿಕೊಂಡು ಹೋದ ವೀರ ಪೋಲಿಸ್ ಅಧಿಕಾರಿಯ ಕತೆಯಿದು.

ಮುಂಬೈ ಮೂಲದ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದಿದ್ದ ಮಾಹಿತಿಯಿದು, ಆ ವೀರನ ಬಗ್ಗೆ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಇಲ್ಲಿ ಬರೆಯುತಿದ್ದೇನೆ.

ಸುತ್ತಲೂ ಕಗ್ಗತ್ತಲು, ಬೀದಿ ಬದಿಯ ದೀಪವೂ ಅಲ್ಲಿರಲಿಲ್ಲ. ಅದೇ ಜಾಗದಲ್ಲಿ ಕೈಯಲ್ಲಿ ರೈಫಲ್ ಹಿಡಿದು ಪಹರೆ ಕಾಯುತಿದ್ದವರು ಮುಂಬೈನ ಪೋಲಿಸ್ ಸಬ್-ಇನ್ಸ್ಪೆಕ್ಟರ್ ಬಾಪುರಾವ್ ದುರ್ಗುಡೆ. ಅವರಿಗೆ ಕಳೆದ ಬುಧವಾರ ಉಗ್ರರ ದಾಳಿಗೆ ತುತ್ತಾಗಿದ್ದ 'ಕಾಮ ಆಸ್ಪತ್ರೆ'ಯ ಬಳಿಯಿರುವ 'St Xavier’s' ಕಾಲೇಜ್ನ ಬಳಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ಕಾಮ ಆಸ್ಪತ್ರೆಯ ಕಡೆ ಸಾರ್ವಜನಿಕರು ಬರದಂತೆ ತಡೆಯಲು ಆದೇಶ ಬಂದಿತ್ತು.

ಅವರು ನೋಡುತಿದ್ದಂತೆ ಇಬ್ಬರು ಕಾಲೇಜ್ ವಿದ್ಯಾರ್ಥಿಗಳಂತೆ ಕಾಣುವ ಯುವಕರು ಕಾಮ ಆಸ್ಪತ್ರೆ ಬಳಿ ಹೊರಟಿದ್ದರು, ದುರ್ಗುಡೆ ಯುವಕರನ್ನು ಎಚ್ಚರಿಸಲು "ಕಾಮ ಆಸ್ಪತ್ರೆ ಬಳಿ ಉಗ್ರರ ದಾಳಿಯಾಗಿದೆ, ಗುಂಡಿನ ದಾಳಿ ನಡೆಯುತ್ತಿದೆ, ಅತ್ತ ಹೋಗಬೇಡಿ" ಎಂದು ಕೂಗಿ ಹೇಳಿದರು. ಆದರೆ ಆ ಯುವಕರು ಒಮ್ಮೆ ದುರ್ಗುಡೆಯವರನ್ನು ನೋಡಿ ಮುಂದಡಿಯಿಟ್ಟರು.

ಬಹುಷಃ ಯುವಕರಿಗೆ ಹೇಳಿದ್ದು ಸರಿಯಾಗಿ ಕೇಳಿಲ್ಲ ಎಂದು ತಿಳಿದು, ಅವರತ್ತ ಹೆಜ್ಜೆಯಿಡಲು ಶುರು ಮಾಡಿದರು.

ಅವರ ಸನಿಹ ತೆರಳಿ ಅಡ್ಡಗಟ್ಟುವಷ್ಟರಲ್ಲಿ ಯುವಕನ ಕೈಯಲ್ಲಿದ್ದ AK47 ಬಾಯ್ತೆರೆದಿತ್ತು. ನಾನು ತಡೆದಿರುವುದು ಉಗ್ರರನ್ನು ಎಂದು ದುರ್ಗುಡೆಯವರಿಗೆ ತಿಳಿದು ರೈಫಲ್ ತೆಗೆಯುವಷ್ಟರಲ್ಲಿ ತೋರಿ ಬಂದ ಬುಲೆಟ್ ಅವರ ಎದೆಗೆ ನಾಟಿತ್ತು.

ಪ್ರಾಣ ಉಳಿಸಲು ಹೋದವನ ಪ್ರಾಣವನ್ನೇ ತೆಗೆದರು ಉಗ್ರರು.
ಆ ವೀರ ಯೋಧನಿಗೊಂದು ನುಡಿ ನಮನ.

ಪನ್ನೀರೋ.. ಕಣ್ಣೀರೋ..

ಸಪ್ತಪದಿ ತುಳಿಯಲು ಹೊರಟ
ಗೆಳತಿಯ ನೋಡಲು ಹೋಗಿದ್ದೆ
ನಾ ಸಪ್ತರ್ಷಿ ಕಲ್ಯಾಣ ಮಂದಿರಕ್ಕೆ

ಸಪ್ತ ಸ್ವರಗಳ ಹಿಮ್ಮೇಳ ಮೊಳಗುತಿದ್ದ
ಕಲ್ಯಾಣ ಮಂದಿರದೊಳಗೆ ಕಾಲಿಡುತಿದ್ದಂತೆ
'ಪನ್ನೀರ ಸ್ವಾಗತ' ಕೋರಲು ನಿಂತಿದ್ದ
ಅವಳ ನೋಡಿದೆ, ಆಹಾ! ಜಗತ್ ಸುಂದರಿಯವಳು

ನಾ ಕೊಟ್ಟ ನಗೆ ಮಲ್ಲಿಗೆಯ ಮುಡಿದವಳಿಗೆ
ಬೆಳ್ಳಿ ಕಾಲುಂಗುರವ ತೊಡಿಸಿ,ನನ್ನ
ಹೃದಯದ ಮನೆಗೆ ಸ್ವಾಗತಿಸಲೇ
ಪ್ರೀತಿಯ ಅರಮನೆಗೆ ಮಹಾರಾಣಿ ಮಾಡಲೇ
ಎಂದು ಮನದಲ್ಲಿ ಅಂದು ಕೊಂಡಾಗಲೇ

ಅವಳ ಪಕ್ಕ ನಿಂತಿದ್ದ ಮುದ್ದಾದ ಮಗು
ಹೇಳಿತು ಮುತ್ತಿನಂತ ಮಾತೊಂದು
"ಅಮ್ಮಾ, ಅಮ್ಮಾ ಅಂಕಲ್ಗೆ ನಾನು
ಪನ್ನೀರು ಹಾಕ್ತೀನಿ ಕೊಡಮ್ಮಾ!!! "

-- ರಾಕೇಶ್ ಶೆಟ್ಟಿ Laughing out loud

ಚಾ ಚಾ ನೆಹರೂ,ಚೀನಿ ಭಾಯಿ ಹಾಗೂ ಚರಮ ಗೀತೆ!!!

"ಮನುಷ್ಯ ಸುಖವಾಗಿರುವಾಗ ದೇವರು , ಡಾಕ್ಟರ್ ಹಾಗು ಯೋಧರನ್ನು ಮರೆತುಬಿದುತ್ತಾನೆ" ಅಂತ ಮೊನ್ನೆ ರೇಡಿಯೋದಲ್ಲಿ ರವಿ ಬೆಳಗೆರೆ ಹೇಳುತ್ತಿದ್ದರು. ಅವರಿಗೆ ಈ ಮಾತನ್ನು ಹೇಳಿದ್ದು ಕಾರ್ಗಿಲ್ ಸಮರದಲ್ಲಿ ವೀರ ಮರಣವನ್ನಪ್ಪಿದ 'ಪುರುಷೋತ್ತಮ್' ಎಂಬವರು.
ಈ ದಿನ ಅಂತ ವೀರ ಯೋಧರ ನೆನಪಿಗಾಗಿ ಈ ಲೇಖನ. ಅಂದ ಹಾಗೆ ವೀರ ಯೋಧರ ನೆನಪಾಗಲು ಕಾರಣವೇನು ಗೊತ್ತೇ, 'ಮಕ್ಕಳ ದಿನಾಚರಣೆ'.

ಮಕ್ಕಳ ದಿನಾಚರಣೆ ಎಂದರೆ ತಟ್ಟನೆ ನೆನಪಿಗೆ ಬರುವವರು ಚಾ ಚಾ ನೆಹರು. ಅವರ ಹುಟ್ಟು ಹಬ್ಬವನ್ನು ತಾನೆ ನಾವು ಮಕ್ಕಳ ದಿನಾಚರಣೆ ಎಂದು ಆಚರಿಸುವುದು. ಮಕ್ಕಳಿಗೆ ಚಾ ಚಾ ನ ಬಗ್ಗೆ ಕೇಳಿ, "ಅವರು ಭಾರತದ ಮೊದಲ ಪ್ರಧಾನ ಮಂತ್ರಿ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಅವರಿಗೆ ಮಕ್ಕಳು ಹಾಗು ಕೆಂಪು ಗುಲಾಬಿ ಎಂದರೆ ಬಹಳ ಇಷ್ಟ " ಈ ರೀತಿ ಉತ್ತರ ಬರುತ್ತದೆ.
ಆದರೆ ಇಂದು ರೇಡಿಯೋದಲ್ಲಿ ಈ ಮಕ್ಕಳ ದಿನಾಚರಣೆ ಅಂಗವಾಗಿ ಮಾತನಾಡುವಾಗ ನನಗೆ ನೆನಪಾಗಿದ್ದು , ಇಂದಿಗೆ ೪೬ ವರ್ಷಗಳ ಹಿಂದೆ ನಡೆದ ಒಂದು ಘಟನೆ, ಅದು ಭಾರತೀಯರಿಗೆ ಹಾಗು ಭಾರತಕ್ಕೆ ಮರೆಯಲಾಗದಂತಹ ಕರಾಳ ನೆನಪು ತರುವಂತದ್ದು. ಹೌದು ನಾನು ಹೇಳುತ್ತಿರುವುದು ೧೯೬೨ರಲ್ಲಿ ನಡೆದ ಭಾರತ ಚೀನಾ ಯುದ್ಧದ ಬಗ್ಗೆ. ಅದರ ಬಗ್ಗೆಯೇ ಇಲ್ಲಿ ಬರೆದಿದ್ದೇನೆ.
ಈ ಲೇಖನಕ್ಕೆ ಮೂಲ ಆಧಾರ "ಹಿಮಾಲಯನ್ ಬ್ಲಂಡರ್" ಎಂಬ ಹೊತ್ತಿಗೆ "ಬ್ರಿಗೇಡಿಯರ್ ಜಾನ್.ಪಿ ದಳವಿ" ಅವರು ಬರೆದಿದ್ದು , ಅದನ್ನು ರವಿ ಬೆಳಗೆರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆ ಘಟನೆಗಳನ್ನು ನನಗೆ ಅನ್ನಿಸಿದ ರೀತಿಯಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಓದಿ ಕೊಳ್ಳಿ.

ತಣ್ಣಗೆ ಕೊರೆಯುತ್ತಿರುವ ಚಳಿ, ಕಣ್ಣರಳಿಸಿದಷ್ಟು ದೂರ ಕಾಣುವ ಬೆಳ್ಳ ಬಿಳುಪಿನ ಮಂಜು, ಧರಿಸಿರುವ ತೆಳ್ಳನೆ ಕಾಟನ್ ಶಿರ್ಟನ್ನು ಸೀಳಿ ಹೊಳ ನುಗ್ಗುತ್ತಿರುವ ಹಿಮಗಾಳಿಗೆ ಜೀವ ಹಿಂಡಿದಂತಾಗುತ್ತಿದೆ , 'ಶೂ' ಗಳು ಹಳೆಯದಾಗಿ ತಳ ಸವೆದಿದೆ, ಫಳ ಫಳಿಸುವ ಸೂರ್ಯನ ಏನಾದರು ಕಣ್ಣು ಬಿಟ್ಟನೆಂದರೆ ಅಷ್ಟೆ , ಬೆಳಕಿನ ಪ್ರತಿಫಲನದಿಂದ 'ಲುಂಫೋ 'ದ ತುತ್ತ ತುದಿಯಲ್ಲಿ ನಿಂತು 'ಭಾರತ ಮಾತೆ'ಯ ರಕ್ಷಣೆ ಮಾಡುತ್ತಿರುವ ವೀರ ಯೋಧನ ಕಣ್ಣೆ ಶಾಶ್ವತವಾಗಿ ಕುರುಡಾಗುತ್ತವೆ.ಆದರು ಅವನು ಛಲ ಬಿಟ್ಟಿಲ್ಲ, ತಾಯ್ನೆಲದ ರಕ್ಷಣೆಗೆ ಟೊಂಕಕಟ್ಟಿ ನಿಂತವನ ಮೈ ಮುಚ್ಚಲು ಸರಿಯಾದ ಬಟ್ಟೆಗಳಿಲ್ಲ.

ಹೌದು, ಅದು ಅಕ್ಟೋಬರ್ ತಿಂಗಳು ೧೯೬೨ನೆ ಇಸವಿ. ಅತ್ತ ದೂರದ 'ಲುಂಫೋ'ದಲ್ಲಿ 'ಭರತ ಮಾತೆ'ಯ ವೀರ ಪುತ್ರ ಚಳಿ ಮಳೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದೆ, ಯಾರು ಇಲ್ಲದಂತಹ ನಿರ್ಜನ ಪ್ರದೇಶದಲ್ಲಿ ಅರೆಬೇತ್ತಲೆಯಾಗಿ ನಿಂತಿದ್ದಾರೆ,
ಇತ್ತ ದೂರದ 'ದೆಹಲಿ'ಯಲ್ಲಿ ಭವ್ಯವಾದ ಹವಾ ನಿಯಂತ್ರಿತ ಕೋಣೆಯಲ್ಲಿ ಗರಿ ಗರಿ ಇಸ್ತ್ರಿ ಮಾಡಿದ ಬಟ್ಟೆ, ಎಡಗೈನಲ್ಲಿ 'ಕೆಂಪು ಗುಲಾಬಿ' (ಪ್ರೀತಿಯ ಸಂಕೇತ) , ಬಲಗೈನಲ್ಲೊಂದು 'ಬಿಳಿ ಪಾರಿವಾಳ' (ಶಾಂತಿಯ ಸಂಕೇತ') ಹಿಡಿದು ನಿಂತಿದ್ದರು 'ಚಾ ಚಾ ನೆಹರು'!

ಭಾರತ-ಚೀನಾ ಯುದ್ಧ ಶುರುವಾಗಿದೆ, ನಮ್ಮ ಬಳಿ ಯೋಧರ ಸಂಖೆಯು ಕಡಿಮೆ, ಇದ್ದ ಧೀರ ಯೋಧರ ಬಳಿ ಬಟ್ಟೆ ,ಶೂ ,ಬಂದೂಕು, ಬಾಂಬೂ, ಕಾಡತೂಸು, ಕಡೆಗೆ 'ಆಹಾರ'ವು ಸರಿಯಾಗಿ ಇರಲಿಲ್ಲ.
ಆದರೆ ಇದಾವುದರ ಪರಿವೆ ಇಲ್ಲದವರಂತೆ 'ಚಾ ಚಾ ನೆಹರು' ಮೃಷ್ಟಾನ್ನ ಭೋಜನವನ್ನು ಮುಗಿಸಿ , ವಿಮಾನವೇರಿ 'ಇಂಗ್ಲೆಂಡ್,ನೈಜೀರಿಯ,ಶ್ರೀಲಂಖ'ದಲ್ಲಿ 'ಶಾಂತಿ' ಸಂದೇಶ ಸಾರಲು ಹೊರಟಿದ್ದರು. ಇಲ್ಲಿ ಭಾರತ ಚೀನಿ ಶತ್ರುಗಳ ಕೈಯಲ್ಲಿ ಸಿಕ್ಕಿ ನಲುಗುತ್ತಿದ್ದಾರೆ, ನಮ್ಮ 'so called' ಸ್ವಾತಂತ್ರ್ಯ ಹೋರಾಟಗಾರ ಪ್ರಪಂಚ ಪರ್ಯಟನೆ ಮಾಡುತ್ತಿದ್ದರು.

'ಕೃಷ್ಣನ್ ಮೆನನ್' ಎಂಬ ಒಬ್ಬ ರಕ್ಷಣಾ ಸಚಿವ, ದೇಶದ ರಕ್ಷಣೆಗೆ ಬಗ್ಗೆ ಯೋಚಿಸಬೇಕಾದವ 'ಚಾ ಚಾ'ನೊಂದಿಗೆ ವಿದೇಶ ಪ್ರಯಾಣ ಮಾಡುತ್ತಿದ್ದರು. ಜನರಲ್ ತೋಪರ್ ದಿಲ್ಲಿಯಲ್ಲಿ ಮಲಗಿದ್ದರೆ, ಜನರಲ್ ಕೌಲ ಸಂಸಾರ ಸಮೇತ ಕಾಶ್ಮೀರದಲ್ಲಿ ರಜೆಯಲ್ಲಿದ್ದ.

ಹೀಗೆ 'ಚಾ ಚಾ ನೆಹರು' ಎಂಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗು ಇತರೆ ಮೂವರು ಸೇರಿಕೊಂಡು ಅಖಂಡ ಭಾರತವನ್ನು ಚಿನಿಗಳ ಪಾದದ ಬಳಿ ಇಟ್ಟುಬಿಟ್ಟರು.

ಅಂದು ಚಾ ಚಾ ನೆಹರುರವರ ಹುಚ್ಚಾಟಕ್ಕೆ ಬಲಿಯಾದವರ ಸಂಖ್ಯೆ ಹತ್ತಿರ ೩-೪ ಸಾವಿರದಷ್ಟು. ಆ ವೀರ ಯೋಧರ ತಂದೆ,ತಾಯಿ,ಹೆಂಡತಿ,ಮಕ್ಕಳು,ಅನ್ನ,ಅಕ್ಕ,ತಮ್ಮಂದಿರ ಗೋಳು ಸಹ ಬಹುಷಃ ಭಾರತ ರತ್ನ ಚಾ ಚಾರಿಗೆ ಕೇಳಲೇ ಇಲ್ಲ. ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಾಂಧಿಜಿಯವರ ನಂತರದ 'ಶಾಂತಿ ದೂತ'ಎನಿಸಿಕೊಳ್ಳುವ ಹುಚ್ಚು ಹಂಬಲವಿತ್ತೆನೂ,
ಅದೇ ಕಾರಣದಿಂದಾಗಿ ಇಂದಿಗೂ 'ಕಾಶ್ಮೀರ' ಸಮಸ್ಯೆ ಎಂಬ ಭೂತ ಬೆಂಬಿಡದೆ ನಮ್ಮನ್ನು ಕಾಡುತ್ತಿದೆ. ೧೯೪೯ರಲ್ಲಿ ನಡೆದ 'ಭಾರತ-ಪಾಕಿಸ್ತಾನ' ಯುದ್ಧದಲ್ಲಿ ನಮ್ಮ ಸೈನಿಕರನ್ನು ಚಾ ಚಾ ತಡೆಯದಿದ್ದರೆ ಇವತ್ತಿಗೆ 'ಕಾಶ್ಮೀರ ಕಣಿವೆ' ಭಾರತ ಮಾತೆಯ ಕೀರೆಟವಾಗಿ ಮೆರೆಯುತಿತ್ತು. ಬಹುಷಃ ಈಗ ಕಾಡುತ್ತಿರುವ ಭಯೋತ್ಪಾದನೆ ಎಂಬ ಭೂತವು ಇರುತ್ತಿರಲಿಲ್ಲ. ಆದರೆ ಚಾ ಚಾ ರಕ್ತ ಪಾತ ಬೇಡ,ಇದನ್ನು ವಿಶ್ವ ಸಂಸ್ಥೆಗೆ ಕೊಂಡೊಯ್ದ ನಾನೇ ಪರಿಹರಿಸುವೆ ಅಂತ ಹೇಳುತ್ತಾ , ನಮ್ಮ ನಮ್ಮ ನಡುವಿನ ವಿಷಯವನ್ನು ಅಂತರರಾಷ್ಟ್ರೀಯ ವಿಷಯವನ್ನಾಗಿ ಮಾಡಿದರು. ಅವರು ಅಂದು ಮಾಡಿದ ತಪ್ಪಿನಿಂದಾಗಿ ಇಂದು ೨ ಶತ್ರು ರಾಷ್ಟ್ರಗಳು ಬಲಿತು ಕುಂತಿವೆ, ಅದು ಅಣ್ವಸ್ತ್ರದೊಂದಿಗೆ ನೆನಪಿರಲಿ.

ಅಂದು ಚೀನಾ 'ಟಿಬೆಟ್' ಅನ್ನು ವಶಪಡಿಸಿಕೊಂಡಾಗ ಇಡಿ ವಿಶ್ವವೇ ಅವರ ವಿರುದ್ಧ ತಿರುಗಿ ಬಿದ್ದಿತ್ತು, ಕೇವಲ 'ಚಾ ಚಾ ನೆಹರುವಿನ ಭಾರತ'ವೊಂದನ್ನು ಬಿಟ್ಟು. ಟಿಬೆಟ್ನ ಸ್ವಾತಂತ್ರ್ಯ ಹೋರಾಟಗಾರರು ಹೊರಜಗತ್ತಿನ ಬೆಂಬಲಕ್ಕೆ ಅಂಗಲಾಚುತಿದ್ದರು, ಇತ್ತ ವಿಶ್ವ ಸಂಸ್ಥೆಯಲ್ಲಿ 'ಚೀನಾ-ಟಿಬೆಟ್' ನ ವಿಷಯ ಪ್ರಸ್ತಾಪವಾದಗಳೆಲ್ಲ ಚೀನಾದ ಪರವಹಿಸಿದ್ದು 'ಚಾ ಚಾ ನೆಹರು'. ಅದು ಅವರಿಬ್ಬರ ಆಂತರಿಕ ವಿಷಯ ಅದರಲ್ಲಿ ನಾವು ತಲೆ ಹಾಕುವುದು ಬೇಡ ಅಂತ ಬೋಧನೆ ಮಾಡಿದ್ದು ಇದೆ ಚಾ ಚಾ.

ಬಹುಷಃ ಕಾಮನ್ ಸೆನ್ಸ್ ಇರುವಂತ ಮನುಷ್ಯನಿಗೆ ತಿಳಿಯಬಹುದಾದ ವಿಷಯವೇನೆಂದರೆ ಚೀನಾ ಟಿಬೆಟ್ ಅನ್ನು ಭಾರತದ ಮೇಲೆ ಸವಾರಿ ಮಾಡಲು ರಹದಾರಿಯಾಗಿ ಬಳಸುತ್ತದೆ ಎಂದು, ಅದು ನಮ್ಮ ಮುತ್ಸದ್ದಿಗೆ ತಿಳಿಯಲೇ ಇಲ್ಲ.
ಇಂದು ಅದೇ ಚೀನಾ ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಕೊಡುವುದನ್ನು ವಿರೋಧಿಸುತ್ತಿದೆ, ಅಮೇರಿಕಾದೊಂದಿಗಿನ ಅಣ್ವಸ್ತ್ರ ಒಪ್ಪಂದಕ್ಕೆ ಅಡ್ಡಿಪದಿಸುತ್ತದೆ.

ತಪ್ಪು ಮಾಡಿದ್ದು ಅವರು ಅನುಭವಿಸಬೇಕಾದವರು ನಾವು. ಇದೆಲ್ಲಿಯ ನ್ಯಾಯ ಚಾ ಚಾ???

ಅವಳ ಕಣ್ಣು

ದೂರದಿಂದಲೇ ಸೆಳೆದಿದ್ದವು ನನ್ನನ್ನು
ಅವಳ ಚೆಲುವ ನೀಲಿ ಕಣ್ಣುಗಳು.
ನೋಡು ನೋಡುತಿದ್ದಂತೆ ಬಂದೆ ಬಿಟ್ಟಳು ಹತ್ತಿರ
ಅವಳ ನೋಡಿದ ನನ್ನಲ್ಲಿ ಇರಲಿಲ್ಲ ಯಾವುದೇ ಉತ್ತರ.
ಮರುಕ್ಷಣವೇ ಏನೋ ಕಳೆದುಕೊಂಡ ಅನುಭವ ಮನದಲ್ಲಿ,
ಕಾಣೆಯಾಗಿದ್ದು ನನ್ನ 'ಪ್ರೀತಿಯ ಹೃದಯ'ವಾ ?
ಎಂದು ಯೋಚಿಸುವಷ್ಟರಲ್ಲಿ ಬಂದೆ ಬಿಟ್ಟಿತ್ತು ನನ್ನ ನಿಲ್ದಾಣ
ಇಳಿದು ಜೇಬು ತಡವಿದಾಗಲೇ ತಿಳಿದದ್ದು
ಆ ಹುಡುಗೀ ಕದ್ದದ್ದು 'ಪ್ರೀತಿಯ ಹೃದಯ' ಅಲ್ಲ
ನನ್ನ 'ಪ್ರೀತಿಯ ಪರ್ಸ್' ಎಂದು!!!

- ರಾಕೇಶ್ ಶೆಟ್ಟಿ Smiling